ಮಂಗಳೂರು:ಕೂಡಿ ಹಾಕಲಾಗಿದ್ದ ಮಹಿಳೆಯೊಬ್ಬರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ರಕ್ಷಿಸಿರುವ ಘಟನೆ ಮಂಗಳೂರು ಬಳಿಯ ಕೆಮ್ಮಿಂಜೆ ಗ್ರಾಮದ ಕರೆಜ್ಜ ಇಡಬೆಟ್ಟುಎಂಬಲ್ಲಿ ನಡೆದಿದೆ.
ಆಶಾ ಎಂಬುವವರನ್ನು ವಿದ್ಯುತ್ ಸಂಪರ್ಕವಾಗಲೀ, ಕಿಟಕಿಯಾಗಲೀ ಇಲ್ಲದ ಸಿಮೆಂಟ್ ಶೀಟ್ ಮನೆಯಲ್ಲಿ ಕೂಡಿ ಹಾಕಲಾಗಿತ್ತು. ಆ ಬಗ್ಗೆ ಪೊಲೀಸರಿಗೆ ಅನಾಮದೇಯ ವ್ಯಕ್ತಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಮಹಿಳೆಯರನ್ನು ರಕ್ಷಿಸಿದ್ದಾರೆ.
ಮಹಿಳೆಯನ್ನು ರಕ್ಷಿಸಿದ ವೇಳೆ, ಆಕೆ ನಡೆಯಲಾಗದ ಮತ್ತು ಮಾತನಾಡಲಾಗದ ಪರಿಸ್ಥಿತಿಯಲ್ಲಿದ್ದರು. ಆಕೆಯನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಮಹಿಳೆಯ ಪತಿ ಶ್ರೀಪತಿ ಹೆಬ್ಬಾರ್ ಎಂಬಾತನನ್ನು ಸಂಪರ್ಕಿಸಲು ಅಧಿಕಾರಿಗಳು ಯತ್ನಿಸಿದ್ದಾರೆ. ಆದರೆ, ಆತ ಫೋನ್ ಕರೆಯ ಸಂಪರ್ಕಕ್ಕೆ ಸಿಕ್ಕಿಲ್ಲವೆಂದು ವರದಿಯಾಗಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ. ಪೂರ್ಣ ತನಿಖೆಯ ಬಳಿಕ ಆಕೆಯನ್ನು ಬಂಧನದಲ್ಲಿಡಲು ಕಾರಣವೇನು ಎಂಬುದು ತಿಳಿಯಲಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.