ಮನೆಯ ಹತ್ತಿರ ಮೇಯಲು ಬಂದ ಹಸುಗಳ ಮೇಲೆ ವೃದ್ಧೆಯೊಬ್ಬರು ಆಸಿಡ್ ಎರಚಿ ವಿಕೃತಿ ಮೆರೆದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗುಣಿ ಅಗ್ರಹಾರ ಗ್ರಾಮದಲ್ಲಿ ನಡೆದಿದೆ.
ಆಸಿಡ್ ಎರಚಿದ ವೃದ್ದೆ ಜೋಸೆಫ್ ಗ್ರೇಸ್ (76) ಎಂದು ಗುರುತಿಸಲಾಗಿದೆ.
ಕಳೆದ ಮೂರು ದಿನಗಳಿಂದ ಮನೆ ಹತ್ತಿರ ಬರುವ ಹಸುಗಳ ಮೇಲೆ ನಿರಂತರವಾಗಿ ವೃದ್ಧೆ ದಾಳಿ ನಡೆಸಿದ್ದಾರೆ. ಇನ್ನು ಹಸುಗಳಿಗೆ ಬಾತ್ ರೂಂ ಗೆ ಬಳಸುವ ಆಸಿಡ್ ಎರಚಿದ್ದು, ಇದು ನಮ್ಮ ಖಾಸಗಿ ಸ್ಥಳ, ಇಲ್ಲಿ ಹಸುಗಳನ್ನು ಬಿಟ್ಟಿರುವುದು ಹಸುವಿನ ಮಾಲೀಕರ ತಪ್ಪು. ಹಸುಗಳು ಮನೆ ಬಳಿ ಬರಬಾರದು ಅಂತ ಹೀಗೆ ಮಾಡಿದ್ದು ಅಷ್ಟೇ, ಬೇರೆ ಉದ್ದೇಶ ನನಗಿಲ್ಲ ಎಂದು ವೃದ್ದೆ ಸಮಜಾಯಿಷಿ ಕೊಟ್ಟಿದ್ದಾರೆ. ಘಟನೆಯಿಂದ ನೊಂದ ಮಾಲೀಕರು ನೋವಿನಿಂದಾಗಿ ನಮ್ಮ ಹಸುಗಳು ಮೂಕವಾಗಿ ರೋಧಿಸುತ್ತಿವೆ. ವೃದ್ಧೆ ಆಸಿಡ್ ಎರಚಿದ್ದರಿಂದ 18 ಹಸುಗಳಿಗೆ ಸುಟ್ಟ ಗಾಯಗಳಾಗಿವೆ. ಸುಟ್ಟ ಗಾಯಗಳಿಂದ ಹಾಲು ಕೂಡ ಕೊಡುತ್ತಿಲ್ಲ ಎಂದು ಮಾಲೀಕರು ಗೋಳಾಡಿದ್ದಾರೆ. ಇನ್ನು ಮಾಲೀಕರ ದೂರಿನ ಮೇರೆಗೆ ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.