ನವದೆಹಲಿ: ದೇಶದಲ್ಲಿ ಜೈವಿಕ ಕೃಷಿ ಪದ್ಧತಿಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕೆಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಅವರನ್ನು ಭೇಟಿಯಾಗಿ ವಿನಯ್ ಗುರೂಜಿ ಮನವಿ ಪತ್ರ ಸಲ್ಲಿಸಿದ್ದಾರೆ.
ನವದೆಹಲಿಯ ಸದಾನಂದಗೌಡ ಅವರ ನಿವಾಸದಲ್ಲಿ ಬುಧವಾರ ಭೇಟಿಯಾದ ವಿನಯ್ ಗುರೂಜಿ ರಾಷ್ಟ್ರೀಯ ರೈತ ದಿನಾಚರಣೆಯ ಅಂಗವಾಗಿ ಸದಾನಂದಗೌಡರಿಗೆ ಶುಭಾಶಯ ಕೋರಿದರು. ಬಳಿಕ ಸದಾನಂದಗೌಡರ ಜೊತೆ ಕೃಷಿ ಕ್ಷೇತ್ರದ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು. ದೇಶದಲ್ಲಿ ಜೈವಿಕ ಕೃಷಿ ಪದ್ಧತಿಗೆ ಹೆಚ್ಚು ಪ್ರಾಧಾನ್ಯತೆ ನೀಡುವಂತೆ ಮನವಿ ಮಾಡಿದರು.
ದೇಶದಲ್ಲಿ ಆಧುನಿಕತೆ ಮತ್ತು ಅಧಿಕ ಇಳುವರಿ ಹೆಸರಿನಲ್ಲಿ ರಾಸಾಯನಿಕ ಮತ್ತು ರಸಗೊಬ್ಬರಗಳ ಬಳಕೆ ಕ್ರಮೇಣ ಹೆಚ್ಚಾಗುತ್ತಿದೆ. ಇದು ಇಂದಿನ ಮಾನವನ ಜೀವನ ಶೈಲಿಯ ಮೇಲೆ ವ್ಯತಿರಿಕ್ತ ಪರಿಣಾಮ ಬಿರುತ್ತಿದೆ. ಮಾನವನ ಆರೋಗ್ಯದಲ್ಲಿ ಏರುಪೇರು ಉಂಟುಮಾಡುತ್ತಿದೆ. ಕ್ಯಾನ್ಸರ್, ಬಿಪಿ, ಸಕ್ಕರೆ ಕಾಯಿಲೆ ಅಂತಹ ಕಾಯಿಲೆಗಳಿಗೆ ತುತ್ತಾಗುತ್ತಿರುವವರ ಸಂಖ್ಯೆ ಕೂಡ ಅಧಿಕವಾಗಿದೆ ಎಂದು ವಿನಯ್ ಗುರೂಜಿ ಕಳವಳ ವ್ಯಕ್ತಪಡಿಸಿದ್ದಾರೆ.
ರಾಸಾಯನಿಕ ವಸ್ತುಗಳನ್ನು ಬಳಸಿ ಬೆಳೆಯುವ ಆಹಾರ ಪದ್ಧತಿಯಿಂದ ಮಾನವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತಿದೆ. ನಮ್ಮ ಪುರಾತನ ದಿನಗಳಲ್ಲಿ ಸನಾತನ ಧರ್ಮದ ಪದ್ಧತಿಯಂತೆ ಜೈವಿಕ ಕೃಷಿ ಪದ್ಧತಿ ದೇಶದಲ್ಲಿ ಇಂದು ಅತಿ ಅವಶ್ಯಕವಾಗಿದೆ. ಜೈವಿಕ ಕೃಷಿ ಪದ್ಧತಿಯಿಂದ ನಮ್ಮ ದೇಶ ಗೋವಿನ ಉಳಿವು ಹಾಗೂ ಅದರ ಗೊಬ್ಬರದಿಂದ ಮಾಡುವ ಕೃಷಿ ಪದ್ದತಿಯು ಮಾನವನ ಆರೋಗ್ಯಕ್ಕೆ ತುಂಬಾ ಒಳ್ಳೆಯ ಹಾಗೂ ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ ಎಂದಿದ್ದಾರೆ.
ದೇಶಿಯ ತಳಿಯ ಗೋವುಗಳ ಸಂರಕ್ಷಣೆ ಹೆಚ್ಚೆಚ್ಚು ಆದರೆ ದೇಶ ಕೂಡ ಹೆಚ್ಚು ಸಮೃದ್ಧಿಯಾಗುತ್ತದೆ. ಗೋವಿನ ಬೆರಣಿಯಿಂದ ಅಗ್ನಿಹೋತ್ರ ಮಾಡುವುದರಿಂದ ವಾತಾವರಣ ಶುದ್ದಿ ಆಗುವುದರ ಜೊತೆಗೆ ವಾತವರಣದಲ್ಲಿ ಇರುವ ಕೆಲವೊಂದು ಮಾರಕ ವೈರಾಣುಗಳು ಕಡಿಮೆ ಆಗಿ ಮಾನವನ ಜೀವನಕ್ಕೆ ಒಳ್ಳೆಯ ಆರೋಗ್ಯಕರ ಜೀವನ ನಡೆಸಲು ಸಹಕಾರಿ ಆಗಲಿದೆ ಇದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಗಮನಕ್ಕೆ ಕೂಡ ತರವಂತೆ ಮನವಿ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ವಿನಯ್ ಗುರೂಜಿಯವರ ಸಾರ್ವಜನಿಕ ಸಂಪರ್ಕ ನಿರ್ವಾಹಕ ಅನಿರೀತ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.