ಮಂಗಳೂರು: ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವದಲ್ಲಿ ಈ ವರ್ಷ ತೆಂಕುತಿಟ್ಟಿನ ಹೊಸ ಮೇಳ ಹೊರಡಲಿದೆ ಎಂಬ ಸುದ್ದಿ ಕರಾವಳಿಯ ಯಕ್ಷಗಾನ ವಲಯದಲ್ಲಿ ಸಂಚಲನವುಂಟು ಮಾಡಿದೆ. ಈ ಬಾರಿಯ ಯಕ್ಷಗಾನ ತಿರುಗಾಟ ಒಂದು ತಿಂಗಳಲ್ಲಿ ಪ್ರಾರಂಭವಾಗಲಿದ್ದು ಅಷ್ಟರೊಳಗೆ ಪಟ್ಲ ಭಾಗವತರ ಮೇಳ ಸಿದ್ಧವಾಗಲಿದೆ.
ಮೂಲ್ಕಿ ಸಮೀಪ ಪಾವಂಜೆಯಲ್ಲಿರುವ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿನಲ್ಲಿ ಹೊಸ ಮೇಳ ಹೊರಡಲಿದೆ. ದೇವಸ್ಥಾನದ ಮೇಳವಾದರೂ ಅದರ ಯಜಮಾನಿಕೆ ಸತೀಶ್ ಶೆಟ್ಟಿಯವರದ್ದು ಎನ್ನಲಾಗುತ್ತಿದೆ. ಈ ಮೂಲಕ ಬಹಳ ವರ್ಷಗಳ ಬಳಿಕ ತೆಂಕುತಿಟ್ಟಿನಲ್ಲಿ ವೃತ್ತಿಪರ ಮೇಳವೊಂದು ಶುರುವಾದಂತಾಗುತ್ತದೆ.
ಕಟೀಲು ಮೇಳದಲ್ಲಿದ್ದ ಸತೀಶ್ ಶೆಟ್ಟಿಯವರು ಕಳೆದ ವರ್ಷದ ತಕರಾರಿನ ಬಳಿಕ ಹೊರಬಂದಿದ್ದರು. ಅನಂತರ ಹವ್ಯಾಸಿಯಾಗಿ ಭಾಗವತಿಕೆ ಮಾಡುತ್ತಿದ್ದ ಅವರು ಒಂದೇ ವರ್ಷದಲ್ಲಿ ತನ್ನದೇ ಯಜಮಾನತ್ವದಲ್ಲಿ ಮೇಳ ಕಟ್ಟುವ ದಿಟ್ಟತನ ತೋರಿಸಿದ್ದಾರೆ.
ಸತೀಶ್ ಶೆಟ್ಟಿಯವರ ಮೇಳ ಸೇರಲು ಅನೇಕ ಕಲಾವಿದರು ಉತ್ಸುಕತೆ ತೋರಿಸಿದ್ದಾರೆ. ಸತೀಶ್ ಶೆಟ್ಟಿಯವರ ಆಪ್ತ ಕಲಾವಿದರಲ್ಲದೆ ಇನ್ನೂ ಕೆಲವು ಪ್ರಖ್ಯಾತ ಕಲಾವಿದರು ಹೊಸ ಮೇಳ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಕಾಲಮಿತಿಯಲ್ಲಿ ಪೌರಾಣಿಕ ಪ್ರಸಂಗಗಳನ್ನು ಮಾತ್ರ ಈ ಮೇಳ ಪ್ರದರ್ಶಿಸಲಿದೆ.
ಕೊರೊನಾ ಸಂಕಷ್ಟ ಕಾಲದಲ್ಲಿ ಯಕ್ಷಗಾನ ಪ್ರದರ್ಶನಗಳು ಸ್ಥಗಿತಗೊಂಡಾಗ ಆರ್ಥಿಕ, ಆರೋಗ್ಯ ಸಮಸ್ಯೆ ಎದುರಿಸಿದ ಅನೇಕ ಯಕ್ಷಗಾನ ಕಲಾವಿದರಿಗೆ ಸತೀಶ್ ಶೆಟ್ಟಿಯವರ ನೇತೃತ್ವದ ಫೌಂಡೇಶನ್ ನೆರವಾಗಿದೆ. ಫೇಸ್ಬುಕ್ ಮತ್ತು ಯೂಟ್ಯೂಬ್ ಮೂಲಕ ಯಕ್ಷಗಾನ, ತಾಳಮದ್ದಳೆ ಏರ್ಪಡಿಸಿ ಯಕ್ಷಗಾನ ಪ್ರಿಯರ ಮನತಣಿಸಿದೆ.