ಬೆಂಗಳೂರು: ಜಾರಿ ನಿರ್ದೇಶನಾಲಯದ (ಇಡಿ) ದೇಶಾದ್ಯಂತ ಪಿಎಫ್ಐ ಮುಖಂಡರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದೆ. ಕರ್ನಾಟಕರ ಸೇರಿದಂತೆ ದೇಶದ 22 ಕಡೆ ಏಕ ಕಾಲದಲ್ಲಿ ದಾಳಿ ಇಡಿ ದಾಳಿ ಮಾಡಿದೆ.
ಬೆಂಗಳೂರು, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ದೆಹಲಿ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ರಾಜಸ್ಥಾನ ಸೇರಿದಂತೆ 9 ರಾಜ್ಯಗಳ 22 ಪ್ರದೇಶಗಳಲ್ಲಿ ದಾಳಿ ನಡೆದಿದೆ. ಪ್ರಮುಖವಾಗಿ ಕೇರಳ ಪಿಎಫ್ಐ ಘಟಕದ ಮುಖ್ಯಸ್ಥ ನಸುರುದ್ದೀನ್ ಎಲಮರಂ ಮನೆ ಮೇಲೆ ದಾಳಿ ಮಾಡಲಾಗಿದೆ. ಪಿಎಫ್ಐ ಸಂಘಟನೆಗೆ ದೇಶ ವಿದೇಶದಿಂದ ಹಣ ಬಂದ ಹಿನ್ನಲೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ದಾಳಿಯ ಸಂದರ್ಭದಲ್ಲಿ ಹಣದ ಮೂಲದ ಕುರಿತು ಇಡಿ ಮಾಹಿತಿ ಕಲೆ ಹಾಕುತ್ತಿದ್ದು, ಬ್ಯಾಂಕ್ ಖಾತೆಗಳ ವಿವರ ಸೇರಿದಂತೆ ಹಲವು ದಾಖಲಾತಿಗಳ ವಿವರ ಪಡೆದುಕೊಂಡಿದೆ ಎಂಬ ಮಾಹಿತಿ ಲಭಿಸಿದೆ.ಪಿಎಫ್ಐ ಕಚೇರಿಗಳ ಮೇಲೆ ಇಡಿ ದಾಳಿ ಹಿನ್ನೆಲೆ ಕರ್ನಾಟಕ ರಾಜ್ಯ ಘಟಕ ಪಿಎಫ್ಐ ರಾಷ್ಟ್ರೀಯ ಕಾರ್ಯದರ್ಶಿ ಅನೀಶ್ ಮಹಮ್ಮದ್ ಸುದ್ದಿಗೋಷ್ಠಿ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. ದೇಶದಲ್ಲಿ ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇವತ್ತು ಪಿಎಫ್ಐ ಸಂಘಟನೆಯ ಮುಖಂಡರ ಮನೆಗಳ ಮೇಲೆ ದೇಶಾದ್ಯಂತ ಇಡಿ ದಾಳಿ ಮಾಡಿದೆ.
ಪಿಎಫ್ಐ ಸಂಘಟನೆಯನ್ನು ಟಾರ್ಗೆಟ್ ಮಾಡುವುದು ಇದೇ ಮೊದಲಲ್ಲ. ಈ ಹಿಂದೆ ಸಿಎಎ ಹೋರಾಟದ ಸಂದರ್ಭದಲ್ಲಿ ಇಡಿ ದಾಳಿ ಮಾಡಿತ್ತು. ಈಗ ದೆಹಲಿಯಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದೆ. ಜನರ ಗಮನ ಬೇರೆಡೆ ಸೆಳೆಯಲು, ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡಲು ಸರ್ಕಾರ ಈ ದಾಳಿ ಮಾಡಿಸಿದೆ. ಆದರೆ ಪಿಎಫ್ಐ ಯಾವುದೇ ಕಾರಣಕ್ಕೂ ತನ್ನ ಹೋರಾಟಗಳನ್ನು ನಿಲ್ಲಿಸುವುದಿಲ್ಲ ಎಂದರು.