Thursday, April 25, 2024
spot_imgspot_img
spot_imgspot_img

ಬಾಲಕನ ಅಪಹರಣಕಾರರನ್ನು ಬಂಧಿಸಿದ ಪೋಲೀಸರು

- Advertisement -G L Acharya panikkar
- Advertisement -

ಬೆಳ್ತಂಗಡಿ: ಉಜಿರೆಯಲ್ಲಿ ಬಾಲಕನ ಕಿಡ್ನಾಪ್ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದ್ದು, ಪೊಲೀಸರು ಮಗುವನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕೋಲಾರದಲ್ಲಿ ಮಗುವನ್ನು ಪತ್ತೆ ಹಚ್ಚಿ 6 ಜನ ಅಪಹರಣಕಾರರನ್ನು ಬಂಧಿಸಿರುವ ಪೊಲೀಸರು, ಅಪಹರಣವಾದ 48 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿದ್ದಾರೆ.

ಉಜಿರೆ ರಥಬೀದಿಯ ಬಿಜೋಯ್ ಅವರ ಮಗ ಅನುಭವ್ (8) ಮನೆಯಂಗಳದಲ್ಲಿ ಆಡುತ್ತಿದ್ದಾಗಲೇ ಎರಡು ದಿನಗಳ ಹಿಂದೆ ಅಪಹರಣಕಾರರು ಅಪಹರಿಸಿದ್ದರು. ಉಭಯ ಜಿಲ್ಲೆಗಳಲ್ಲಿ ಈ ಪ್ರಕರಣ ಸಾಕಷ್ಟು ಆತಂಕ ಸೃಷ್ಟಿಸಿತ್ತು.
ಕೋಲಾರದ ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಹರಣಕಾರರನ್ನು ಮಗುವಿನೊಂದಿಗೆ ವಿಶೇಷ ತಂಡ ಪೊಲೀಸರು ಶನಿವಾರ ಬೆಳಗ್ಗೆ 5 ರ ಹೊತ್ತಿಗೆ ಪತ್ತೆ ಹಚ್ಚಿದರು. ಕೂಡಲೇ ಅಪಹರಣಕಾರರನ್ನು ಕೋಲಾರ ಪೊಲೀಸ್ ಠಾಣೆಗೆ ಕರೆತರಲಾಯಿತು.

ಅಪರಾಹ್ನ 11 ರ ವೇಳೆಗೆ ಕೋಲಾರ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿ, ನಂತರ ಬೆಳ್ತಂಗಡಿ ನ್ಯಾಯಾಲಯಕ್ಕೆ ಕರೆತರಲಾಗುತ್ತದೆ ಎನ್ನಲಾಗಿದ್ದು, ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಉಪನಿರೀಕ್ಷಕ ನಂದಕುಮಾರ್, ಧರ್ಮಸ್ಥಳ ಠಾಣೆ ಉಪನಿರೀಕ್ಷಕ ಪವನ್ ಕುಮಾರ್ ನೇತೃತ್ವದ ವಿಶೇಷ ತಂಡ ಹಾಜರು ಪಡಿಸುವ ಸಾಧ್ಯತೆ

ಇದೆ.

ಮಗು ಸುರಕ್ಷಿತವಾಗಿ ಬರಲಿ ಎಂಬ ಪೋಷಕರ ಹಾರೈಕೆ ಹಾಗೂ ಪ್ರಕರಣವನ್ನು ಸುಖಾಂತ್ಯಗೊಳಿಸಿ ಮಗುವನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಬೇಕೆಂಬ ಪ್ರಯತ್ನ ಎರಡೂ ಫಲಿಸಿದೆ. ಪ್ರಕರಣ ಘಟಿಸಿದ ಕೂಡಲೇ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ನೇತೃತ್ವದಲ್ಲಿ ನಾಲ್ಕು ತಂಡಗಳ ರಚಿಸಿ ಪ್ರಕರಣವನ್ನು ಬೇಧಿಸಲು ಕಾರ್ಯಶೀಲರಾಗಿದ್ದರು.

ಶುಕ್ರವಾರ (ಡಿ. 18) ರಾತ್ರಿಯಿಂದ ಕೋಲಾರದಲ್ಲಿ ಬೀಡುಬಿಟ್ಟ ಪೊಲೀಸರು, ಘಟನೆ ನಡೆದ 48 ಗಂಟೆಗಳೊಳಗೆ ಪ್ರಕರಣವನ್ನು ಬೇಧಿಸಿದ್ದಾರೆ.
ಶನಿವಾರ ಮುಂಜಾನೆ ವೇಳೆಗೆ ಅಪಹರಣಕಾರರನ್ನು ಬಂಧಿಸಿದ ಪೊಲೀಸರು, ಮಗುವನ್ನು ಸುರಕ್ಷಿತವಾಗಿ ತರುವಲ್ಲಿ ಸಫಲರಾಗಿದ್ದಾರೆ.

- Advertisement -

Related news

error: Content is protected !!