ಪುತ್ತೂರು: ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಅವರು ಇಂದು ಪುತ್ತೂರಿಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಅವರು ನರೇಂದ್ರ ಮೋದಿ ಅವರ ಸಹೋದರರಾಗಿದ್ದು, ಭಾರತೀಯ ತೈಲಿಕ್ ಸಾಹು ರಾಥೋಡ್ ಮಹಾಸಭಾ ಮುಖ್ಯ ಸಲಹೆಗಾರರಾಗಿದ್ದಾರೆ




ಪುತ್ತೂರಿನ ಲಕ್ಷ್ಮೀ ದೇವಿ ಬೆಟ್ಟದಲ್ಲಿರುವ ಮಹಾಲಕ್ಷ್ಮೀ ದೇವಿ ಅಮ್ಮನವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ, ನಗರದಲ್ಲಿನ ಕೋಟೆಚಾ ಹಾಲ್ನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಗಾಣಿಗ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಗಾಣಿಗ ಸಮಾಜವು ಗೌರವಯುತ ಹಾಗೂ ಸಂಸ್ಕೃತಿಯುತ ಸಮಾಜ. ರಾಮಾಯಣ ಕಾಲದಿಂದಲೂ, ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲೂ ಗಾಣಿಗ ಸಮಾಜದ ಮಹತ್ವದ ಪಾತ್ರವಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದ ಗಾಣಿಗ ಸಮಾಜದ ಹೆಸರು ವಿಶ್ವದಾದ್ಯಂತ ಪಸರಿಸಿದೆ. ಗಾಣಿಗ ಸಮಾಜದ ಮಗನಿಂದ ದೇಶದಲ್ಲಿ ಮಹತ್ವದ ಬದಲಾವಣೆ ಸಾಧ್ಯವಾಗಿದೆ” ಎಂದು ಹೇಳಿದರು.
ದೇಶಾದ್ಯಂತ ಸುಮಾರು 14 ಕೋಟಿಗೂ ಹೆಚ್ಚು ಗಾಣಿಗ ಸಮುದಾಯದವರು ಇದ್ದರೂ ಸಂಘಟನೆಯ ಕೊರತೆ ಇದೆ ಎಂಬುದನ್ನು ಉಲ್ಲೇಖಿಸಿದ ಅವರು, “ನಾವು ಸಂಘಟಿತರಾದರೆ ದೇಶಕ್ಕಾಗಿ ಏನು ಬೇಕಾದರೂ ಸಾಧಿಸಬಹುದು. ಗಾಣಿಗ ಸಮಾಜ ಒಗ್ಗಟ್ಟಿನಿಂದ ಮುಂದೆ ಬಂದರೆ ನಮ್ಮ ಸಾಮರ್ಥ್ಯವನ್ನು ತೋರಿಸಿಕೊಡಬಹುದು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಗಾಣಿಗ ಸಮುದಾಯದ ಮುಖಂಡರು, ಪದಾಧಿಕಾರಿಗಳು ಹಾಗೂ ಸಮಾಜದ ಸದಸ್ಯರು ಭಾಗವಹಿಸಿದ್ದರು.








