

ವಿಟ್ಲ: ಕಪ್ಪು ಕಲ್ಲಿನ ಕ್ವಾರಿಯಿಂದ ತ್ಯಾಜ್ಯವನ್ನು ನೀರಿನೊಂದಿಗೆ ಬೆರಸಿ ಬೆರೆಸಿ ಬಿಟ್ಟಿದ್ದು, ಸ್ಥಳೀಯಾಡಳಿತ ಈ ನಿಟ್ಟಿನಲ್ಲಿ ಸೂಕ್ತ ಎಚ್ಚರಿಕೆಯನ್ನು ವಹಿಸಿಲ್ಲ. ಮಳೆಯ ನೀರಿನ ಜತೆಗೆ ಖಾಸಗೀ ಜಮೀನುಗಳಿಗೆ ಕಲ್ಲಿನ ಹುಡಿ ನುಗ್ಗಿ ಗದ್ದೆ, ಅಡಿಕೆ ಕೃಷಿ ಹಾನಿಯಾಗಿರುವುದರ ವಿರುದ್ಧ ಸಂತ್ರಸ್ತ ರೈತರೊಂದಿಗೆ ಕುಳ ಭಾಗದ ಗ್ರಾಮಸ್ಥರು ಇಡ್ಕಿದು ಗ್ರಾಮ ಪಂಚಾಯಿತಿ ಮುಂಭಾಗ ಮಂಗಳವಾರ ಪ್ರತಿಭಟನೆಯನ್ನು ನಡೆಸಿದರು.
ಕುಳ ಗ್ರಾಮದಲ್ಲಿರುವ ಹಲವು ಕೃಷಿಕರ ತೋಟಗಳಿಗೆ ಕಲ್ಲು ಕೋರೆಯಿಂದ ಕ್ರಷರ್ ಮಿಶ್ರಿತ ಕಲುಷಿತ ನೀರು ತೋಟಗಳಿಗೆ ನುಗ್ಗುತ್ತಿದೆ. ಇದರಿಂದ ರೈತರ ಫಲವತ್ತದ ತೆಂಗು, ಹಾಗೂ ಭತ್ತದ ಕೃಷಿಗೆ ಹಾನಿಯಾಗುತ್ತಿದೆ. ಕೃಷಿ ಭೂಮಿಯ ಮಣ್ಣು ನಾಶಹೊಂದಿ ಕಲ್ಲಿನ ಹುಡಿ ನಮ್ಮ ತೋಟಕ್ಕೆ ಸೇರಿಕೊಂಡಿದೆ ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕೃಷಿಕರಿಗೆ ಆಗಿರುವ ನಷ್ಟ ಸೂಕ್ತ ಪರಿಹಾರವನ್ನು ಕೊಡಿಸುವ ಭರವಸೆಯನ್ನು ಅಧಿಕಾರಿ ವರ್ಗ ನೀಡಿದೆ. ಕೃಷಿ ಭೂಮಿಗೆ ಆಗಿರುವ ಸಮಸ್ಯೆಯನ್ನು ಸರಿ ಪಡಿಸಿ ಅದರ ವೆಚ್ಚದ ಮಾಹಿತಿಯನ್ನು ಪಂಚಾಯಿತಿ ಅಭಿವೃದ್ಧಿಗೆ ನೀಡಿದಲ್ಲಿ ಪರಿಹಾರವನ್ನು ಕೊಡಿಸುವ ಭರವಸೆಯನ್ನು ನೀಡಿದ್ದಾರೆ. ಉಪತಹಸೀಲ್ದಾರ ವಿಜಯ ವಿಕ್ರಮ, ಗ್ರಾಮ ಕರಣಿಕರಾದ ಕೃತಿಕಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ ರೈತರ ಮನವಿ ಸ್ವೀಕರಿಸಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ನಡೆಸಿದರು.
ಪ್ರತಿಭಟನೆಯಲ್ಲಿ ರೈತ ಸಂಘ ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರು, ಕಾರ್ಯದರ್ಶಿ ಇಬ್ರಾಹಿಂ ಖಲೀಲ್, ಮುಖಂಡರಾದ ಮುರಳೀಧರ ರೈ ಮಠಂತಬೆಟ್ಟು, ರಾಜಾರಾಮ ಕೆ.ಬಿ., ಸುಶಾಂತ್ ಶೆಟ್ಟಿ ಕಂಬಳಬೆಟ್ಟು, ಸುಮಿತ್ ಶೆಟ್ಟಿ ಕಂಬಳಬೆಟ್ಟು, ಮೋಹನ್ ಗುರ್ಜಿನಡ್ಕ, ನಾಸಿರ್ ಕೋಲ್ಪೆ, ಕೇಶವ ಕೊಡಿಪ್ಪಾಡಿ, ಸಂತ್ರಸ್ತ ರೈತರಾದ ಈಶ್ವರ ಪೂಜಾರಿ ಕುಳ, ಭಾರತೀ ರೈ ಹಾಜರಿದ್ದರು.








