13 ವರ್ಷದ ಬಾಲಕನೊಬ್ಬನ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆ.ಸಿ. ರೋಡ್ ನಡೆದಿದೆ. ಈ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿಬಿಳಿಸಿದೆ. ಈ ಸಂಬ0ಧ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೃತ ಬಾಲಕನನ್ನು ಆಕೀಫ್ (13) ಎಂದು ಗುರುತಿಸಲಾಗಿದೆ. ಈತ ಫನಾಹ್ ಶಾಲೆಯಲ್ಲಿ ಆರನೆ ತರಗತಿ ಕಲಿಯುತ್ತಿದ್ದಾನೆ. ಬಾಲಕನ ದೇಹವು ಮನೆಯಿಂದ ಸುಮಾರು 3 ಕಿ.ಮೀ ದೂರದಲ್ಲಿ ಪತ್ತೆಯಾಗಿದ್ದು ತಲೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಘಟನೆಯ ವಿವರ: ಆಕೀಫ್ ನಿನ್ನೆ ರಾತ್ರಿ 8:30ರ ವೇಳೆಗೆ ಮನೆಯಿಂದ ತೆರಳಿದ್ದ. ಹುಡುಗ ಮತ್ತೆ ಹಿಂದಿರುಗಿ ಬಾರದೇ ಇದ್ದಾಗ ಗಲಿಬಿಲಿಗೊಂಡ ಪೋಷಕರು ಹುಡುಕಾಟ ನಡೆಸಿದ್ದಾರೆ. ಅನುಮಾನದ ಮೇರೆಗೆ ಆಕೀಫ್ ಜೊತೆಗೆ ಪಬ್ ಜಿ ಆಡುತ್ತಿದ್ದ ಸ್ಥಳೀಯ ದೀಪಕ್ ಎಂಬ ಹುಡುಗನ ಮನೆಗೆ ಬಂದು ವಿಚಾರಿಸಿದಾಗ ಏನು ಆಗದಂತೆ ವರ್ತಿಸಿದ್ದ. ಆದರೆ ಪೊಲೀಸರು ಬಂದಾಗ ಸತ್ಯಾಂಶವನ್ನು ಬಯಲು ಮಾಡಿದ್ದಾನೆ.
ದೀಪಕ್ ಮತ್ತು ಆಕೀಫ್ ನಿರಂತವಾಗಿ ಪಬ್ ಜಿ ಆಡುತ್ತಿದ್ದರು. ಆದ್ರೆ ದ್ವಿತೀಯ ಪಿಯುಸಿ ಕಲಿಯುತ್ತಿದ್ದ ಉತ್ತರ ಪ್ರದೇಶ ಮೂಲದ ದೀಪಕ್ ನಿರಂತರ ಸೋಲುತ್ತಿದ್ದ. ಇದರಿಂದ ಇವರಿಬ್ಬರ ನಡುವೆ ದ್ವೇಷ ಬೆಳೆದಿತ್ತು. ನಿನ್ನೆ ರಾತ್ರಿ ಆಟಕ್ಕೆಂದು ಕರೆದ ದೀಪಕ್ ಗೇಮ್ನಲ್ಲಿ ಆಕೀಫ್ನನ್ನು ಸೋಲಿಸಿ ಹೀಯಾಳಿಸಿದ್ದಾನೆ. ಇಬ್ಬರ ನಡುವೆ ತಳ್ಳಾಟ ನಡೆದಿದೆ. ಆಕೀಫ್ ದೀಪಕ್ ಮೇಲೆ ಕಲ್ಲು ಎಸೆದಿದ್ದಾನೆ. ನಂತರ ದೀಪಕ್ ಕಲ್ಲು ಎಸೆದಾಗ ಆಕೀಫ್ ತಲೆ ಮುಖಕ್ಕೆ ಬಿದ್ದಿದೆ.
ಇದರಿಂದ ಕುಸಿದು ಬಿದ್ದ ಬಾಲಕನನ್ನು ಕಾಂಪೌ0ಡ್ ಗೋಡೆಯ ಬದಿಗೆ ಒಯ್ದು ಮಲಗಿಸಿ ಏನೂ ಆಗಿಲ್ಲ ಎಂಬ0ತೆ ಹಿಂತಿರುಗಿದ್ದ ಎಂದು ಆರೋಪಿ ದೀಪಕ್ ಪೊಲೀಸರಿಗೆ ತಿಳಿಸಿದ್ದಾನೆ.ಒಟ್ಟಿನಲ್ಲಿ ಪಬ್ ಜಿ ಆಟದಿಂದ ವೈಮನಸ್ಸು ಮೂಡಿ ಒಂದು ಜೀವ ಪ್ರಾಣವನ್ನೇ ಕಳೆದುಕೊಂಡಿದೆ.