ಪುತ್ತೂರು: ಆಟೋ ರಿಕ್ಷಾ ಮತ್ತು ಕಾರು ನಡುವೆ ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಎದುರು ಡಿಕ್ಕಿ ಸಂಭವಿಸಿದ ಘಟನೆ ಸೆ.14 ರ ಬೆಳಿಗ್ಗೆ ನಡೆದಿದೆ. ಅಪಘಾತದಿಂದ ರಿಕ್ಷಾ ಚಾಲಕ ಸಹಿತ ಅದರಲ್ಲಿದ್ದ ಇಬ್ಬರು ಪ್ರಯಾಣಿಕರಿಗೆ ಗಾಯವಾಗಿದೆ.
ಆಟೋ ಚಾಲಕನನ್ನು ಕಂಬಳಬೆಟ್ಟು ನಿವಾಸಿ ಫಕೀರ್ ಸಾಹೇಬ ಎಂದು ಗುರುತಿಸಲಾಗಿದೆ. ಅವರಿಗೆ ತಲೆಯ ಭಾಗಕ್ಕೆ ಪೆಟ್ಟಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಕಾರು ಚಾಲಕ ಮರೀಲ್ ನಿವಾಸಿ ಸುಬ್ರಹ್ಮಣ್ಯ ಅವರಿಗೆ ಕೂಡ ಸಣ್ಣ ಪುಟ್ಟ ಗಾಯಗಳಾಗಿವೆ. ಕಾರು ಪುತ್ತೂರು ಕಡೆಯಿಂದ ಬೊಳ್ವಾರ್ ಕಡೆಗೆ ಹೋಗುತ್ತಿತ್ತು, ಆಟೋ ಬೊಳ್ವಾರ್ ಕಡೆಯಿಂದ ಪುತ್ತೂರು ಬಸ್ ಸ್ಟಾಂಡ್ ಕಡೆಗೆ ಬರುತ್ತಿದ್ದು, ಪ್ರಗತಿ ಆಸ್ಪತ್ರೆಯ ಮುಂಭಾಗ ಎರಡು ವಾಹನಗಳ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸ್ವಲ್ಪ ಮಟ್ಟಿಗೆ ಮತ್ತು ಆಟೋ ರಿಕ್ಷಾದ ಮುಂಭಾಗ ಪೂರ್ಣ ಪ್ರಮಾಣದಲ್ಲಿ ನಜ್ಜು ಗುಜ್ಜಾಗಿದೆ.
ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.