



ಪುತ್ತೂರಿನಲ್ಲಿ ನಡೆದಿದ್ದ ಬಸ್ ಹಾಗೂ ಕಾರು ನಡುವಿನ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಂಗಳೂರಿನ ಆಸ್ಪತ್ರೆಯಲ್ಲಿ ಸುಮಾರು 5 ತಿಂಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅಪೂರ್ವ ಭಟ್ ಅವರು ಅಕ್ಟೋಬರ್ 7 ರಂದು ನಿಧನರಾಗಿದ್ದರು. ಇದೀಗ ಅವರು ನಿಧನರಾಗಿ ಒಂದು ತಿಂಗಳಾಗುವ ಮೊದಲೇ ಅವರ ತಂದೆ ಅಂಡೆಪುಣಿ ಈಶ್ವರ ಭಟ್ ನಿಧನರಾಗಿದ್ದಾರೆ.
ಅಪಘಾತದಲ್ಲಿ ಅಪೂರ್ವ ಅವರೊಂದಿಗೆ ಅವರ ತಂದೆಯೂ ಗಂಭೀರವಾಗಿ ಗಾಯಗೊಂಡಿದ್ದರು. ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ನಂತರ ಬಿಡುಗಡೆಗೊಂಡು ಪುತ್ತೂರಿನ ಧನ್ವಂತರಿ ಆಸ್ಪತ್ರೆಗೆ ಸೇರಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಈಶ್ವರ ಭಟ್ (70) ಸೋಮವಾರ (ನ.03) ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಘಟನೆ ವಿವರ: ಮೇ 27ರಂದು ಬೆಂಗಳೂರಿನಿಂದ ಶ್ರಾದ್ದ ಕಾರ್ಯಕ್ಕಾಗಿ ಬಂದ ಅಪೂರ್ವ ಬೆಳಿಗ್ಗೆ ಪುತ್ತೂರು ಬಸ್ ನಿಲ್ದಾಣದಲ್ಲಿ ಬಸ್ ನಿಂದ ಇಳಿದು ತಂದೆಯೊಂದಿಗೆ ವ್ಯಾಗನರ್ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ಪುತ್ತೂರಿನ ಹೊರವಲಯದ ಮುರ ಜಂಕ್ಷನ್ ಬಳಿ ಅಪಘಾತವಾಗಿತ್ತು. ಘಟನೆಯಲ್ಲಿ ಅಪೂರ್ವ ಹಾಗೂ ಈಶ್ವರ್ ಭಟ್ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು.








