ಪುತ್ತೂರು: ಯುವತಿಯರಿಗೆ ಕೆಲಸ ಕೊಡಿಸುವ ಆಮಿಷವೊಡ್ಡಿ ಹಣ ಪಡೆದು ವಂಚಿಸಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೇ ಇದೀಗ ಗಂಡನ ಸ್ನೇಹಿತನೆಂದು ನಂಬಿಸಿ ಇಬ್ಬರು ಮಹಿಳೆಯರಿಗೆ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ.27ರಂದು ಪುತ್ತೂರಿನ ನಿವಾಸಿಯೊಬ್ಬರು ಮಂಗಳೂರು ಮೂಲದ ಯುವತಿಯರಿಬ್ಬರಿಗೆ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ್ದರು. ಈ ಕುರಿತು ಪುತ್ತೂರು ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದೀಗ ಪುತ್ತೂರಿನ ಆರ್ಯಾಪು ಗ್ರಾಮದ ಪವಿತ್ರ ಎಂಬವರು ಪರಿಚಯಸ್ಥ ಉಡುಪಿ ಮೂಲದ ಆದರ್ಶ್ ಎಂಬವರ ವಿರುದ್ಧ ಹಣ ವಂಚನೆ ಕುರಿತು ದೂರು ನೀಡಿದ್ದಾರೆ.
ದೂರಿನ ವಿವರ: ಆರ್ಯಾಪು ಗ್ರಾಮದ ಪವಿತ್ರ ಎಂಬವರಿಗೆ ಅವರ ಅಕ್ಕ ಚಿತ್ರ ಅವರ ಮೂಲಕ ಮೂರು ತಿಂಗಳ ಹಿಂದೆ ಉಡುಪಿ ಮೂಲದ ಆದರ್ಶ್ ಎಂಬವರ ಪರಿಚಯವಾಗಿತ್ತು. ಅವರು ತಿಂಗಳಿಗೆ ಉತ್ತಮ ಸಂಬಳ ನೀಡುವ ಕಂಪೆನಿಯಿಂದ ಕೆಲಸ ಕೊಡಿಸುವ ಭರವಸೆ ನೀಡಿದ್ದರು. ಕೆಲಸ ಕೊಡಿಸುವುದಕ್ಕಾಗಿ ಪವಿತ್ರ ಮತ್ತು ಅವರ ಅಕ್ಕ ಚಿತ್ರ ಅವರಿಂದ ಆಗಾಗ ಹಣ ಪಡೆಯುತ್ತಿದ್ದು ಇಲ್ಲಿಯ ತನಕ ಸುಮಾರು ರೂ. 10 ಲಕ್ಷ ಪಡೆದು ಕೊಂಡಿದ್ದು. ಕೆಲಸವೂ ಕೊಡಿಸದೆ ಹಣವನ್ನೂ ಹಿಂದಿರುಗಿಸದೆ ವಂಚನೆ ಮಾಡಿರುವ ಕುರಿತು ಪವಿತ್ರ ಅವರು ಪುತ್ತೂರು ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ.