ಪುತ್ತೂರು : ಕೆಲ ಸಮಯದ ಹಿಂದೆ ನಡೆದಿದ್ದ ಚಿನ್ನಾಭರಣ ಕಳವು ಪ್ರಕರಣದ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಹೇಶ್ ಎನ್ನಲಾಗಿದೆ. ಬಾಡಿಗೆ ಮನೆಯಲ್ಲಿ ವಾಸವಿದ್ದ ದಂಪತಿಗಳು ಮನೆ ಕೆಲಸಕ್ಕೆಂದು ಹಾವೇರಿಯ ಹಾನಗಲ್ ಮೂಲದ ಯುವಕನನ್ನು ಕೆಲಸಕ್ಕೆಂದು ನೇಮಿಸಿದ್ದು ಉಂಡ ಮನೆಗೆಯೇ ದ್ರೋಹ ಬಗೆದಿದ್ದಾನೆ.
ಮನೆಯಲ್ಲಿ ನಡೆದ ಕಳ್ಳತನದ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಎಂ ಕೃಷ್ಣವೇಣಿ ಎಂಬವರು ದೂರು ನೀಡಿದ್ದರು. ಗಂಡ ಹೆಂಡತಿ ಇಬ್ಬರೇ ಬಾಡಿಗೆ ಮನೆಯಲ್ಲಿ ವಾಸವಿದ್ದು ಕೃಷ್ಣವೇಣಿ ಅವರ ಗಂಡ ಎಂ.ವಿಶ್ವನಾಥ ನಾಯ್ಕ ಅವರಿಗೆ ಅಪಘಾತ ನಡೆದಿತ್ತು. ಹೀಗಾಗಿ ಗಂಡನ ಆರೈಕೆ ಹಾಗೂ ಮನೆ ಕೆಲಸಕ್ಕಾಗಿ ಹಾವೇರಿ ಮೂಲದ ಮಹೇಶ ಎಂಬುವರನ್ನು ಕೆಲಸಕ್ಕೆಂದು ನೇಮಕ ಮಾಡಿದ್ದಾರೆ. ಆದರೆ ಆತ ಉಂಡ ಮನೆಗೆಯೇ ದ್ರೋಹ ಬಗೆದಿದ್ದ.
ದೇವರ ಕೋಣೆಯಲ್ಲಿರುವ ಕಪಾಟಿನ ಬೀಗ ಹಾಕದ ಲಾಕರ್ ಚಿನ್ನಾಭರಣಗಳನ್ನು ಇಟ್ಟಿದ್ದರು. 12.05.2023 ರಂದು ಮೆಹಂದಿ ಕಾರ್ಯಕ್ರಮಕ್ಕೆ ಹೋಗಲು ಚಿನ್ನದ ಆಭರಣಗಳು ಇಟ್ಟ ಜಾಗದಲ್ಲಿ ಹುಡುಕಿದಾಗ ಚಿನ್ನ ಕಳವು ಆಗಿರುವುದು ಬೆಳಕಿಗೆ ಬಂದಿದೆ. ಇದರಿಂದ ಸಂಶಯಗೊಂಡ ಮನೆಯೊಡತಿ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.
ಪಿರ್ಯಾದಿದಾರರು ಮಲಗುವ ಕೋಣೆಯ ಕಪಾಟಿನ ಲಾಕರ್ನಲ್ಲಿ ಹುಡುಕಿದಾಗ ವಜ್ರದ ಹರಳಿರುವ ಚಿನ್ನದ ಉಂಗುರು ಕಂಡುಬಂದಿರುವುದಿಲ್ಲ. ಮನೆಯಲ್ಲಿ ಎಲ್ಲಾ ಕಡೆಯಲ್ಲೂ ಹುಡುಕಿದಾಗ ಪಿರ್ಯಾದಿದಾರರ 01 ಪವನ್ ತೂಕದ 07 ವಜ್ರದ ಹರಳಿರುವ 01 ಚಿನ್ನದ ಉಂಗುರ, ಅದರ ಜೊತೆಯಲ್ಲಿ ಇರಿಸಿದ 01 ಗ್ರಾಂ ತೂಕದ ಬಂಗಾರದ ಮೂಗುತಿ, ಅಲ್ಲದೇ ಪಿರ್ಯಾದಿದಾರರ ಅಳಿಯನ 01 ಪವನ್ ತೂಕದ ನವರತ್ನ ಉಂಗುರ ಹಾಗೂ ಪಿರ್ಯಾದಿದಾರರ ½ ಪವನ್ ತೂಕದ ಒಡ್ಡಿ ಉಂಗುರ ಕಾಣೆಯಾಗಿರುತ್ತದೆ. ಈ ಬಗ್ಗೆ ಮನೆ ಕೆಲಸದ ವ್ಯಕ್ತಿಯ ಬಗ್ಗೆ ಸಂಶಯಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಮಹೇಶ್ ಎಂಬಾತನನ್ನು ವಿಚಾರಣೆ ನಡೆಸಿದಾಗ ಆತ ಕಳ್ಳತನ ಮಾಡಿರೋದು ತಿಳಿದುಬಂದಿದೆ.
ಮಹೇಶನನ್ನು ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿಯಿಂದ 1.48 ಗ್ರಾಂ ಚಿನ್ನದ ತಾಯಿತಾ, 4.12 ಗ್ರಾಂ ಚಿನ್ನ, 7.99 ಗ್ರಾಂ ಚಿನ್ನ ಮತ್ತು 7 ಬಿಳಿ ಬಣ್ಣದ ಹರಳುಗಳು, 10.98 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದ್ದು, ಒಟ್ಟು 24.57 ಗ್ರಾಂ ಚಿನ್ನವನ್ನು ಮತ್ತು 7 ಬಿಳಿ ಬಣ್ಣದ ಹರಳುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಯನ್ನು ಜೂ.3 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.