
ಪುತ್ತೂರು: ಸಂಪ್ಯದ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಸಂಪ್ಯ ಆವರಣದಲ್ಲಿ ಮೇ 3, 2026 ಭಾನುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಉಚಿತ ಮಹಾ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿದೆ.ಆರೋಗ್ಯ ರಕ್ಷಾ ಸಮಿತಿ ಸಂಪ್ಯ ಇವರ ನೇತೃತ್ವದಲ್ಲಿ ನಡೆಯುವ ಈ ಶಿಬಿರದಲ್ಲಿ ಒಟ್ಟು 15ಕ್ಕೂ ಅಧಿಕ ವಿಭಾಗಗಳ ತಜ್ಞ ವೈದ್ಯರಿಂದ ಉಚಿತ ತಪಾಸಣೆ ಮತ್ತು ಸಲಹೆ ನೀಡಲಾಗುತ್ತದೆ. ಬೆಳಿಗ್ಗೆ 9 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಸೇವೆಗಳು ಲಭ್ಯವಾಗಲಿವೆ.ಶಿಬಿರದ ಅಂಗವಾಗಿ ಬೆಳಿಗ್ಗೆ 9:30ಕ್ಕೆ ಡಾ. ಗಣೇಶ್ ಮುದ್ರಾಜೆ ಅವರು “ಮಾದಕ ವ್ಯಸನ ಮತ್ತು ಅದರ ದುಷ್ಪರಿಣಾಮಗಳು” ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
ನಂತರ ಬೆಳಿಗ್ಗೆ 11 ಗಂಟೆಯಿಂದ ಡಾ. ಪ್ರೀತಿ ರಾಜ್ ಬಲ್ಲಾಳ್ ಅವರು ಪ್ರಥಮ ಚಿಕಿತ್ಸೆಯ ಪ್ರಾತ್ಯಕ್ಷಿಕೆ ನಡೆಸಲಿದ್ದಾರೆ.ಈ ಶಿಬಿರದಲ್ಲಿ ಶಸ್ತ್ರಚಿಕಿತ್ಸೆ, ಇಎನ್ಟಿ, ಕಣ್ಣಿನ, ಹೃದಯ, ನರ, ಮಕ್ಕಳ, ಸ್ತ್ರೀರೋಗ, ಎಲುಬು-ಕೀಲು, ಚರ್ಮ, ದಂತ, ಹೋಮಿಯೋಪತಿ, ಶ್ವಾಸಕೋಶ, ಮನೋರೋಗ ಹಾಗೂ ಆಯುರ್ವೇದ ಸೇರಿದಂತೆ ವಿವಿಧ ವಿಭಾಗಗಳ ತಜ್ಞ ವೈದ್ಯರು ಭಾಗವಹಿಸಲಿದ್ದಾರೆ.
ಉಚಿತ ಸೌಲಭ್ಯಗಳಾಗಿ ಎಲುಬು ಸಾಂದ್ರತೆಯ ಪರೀಕ್ಷೆ (Bone Density Test), HbA1C ರಕ್ತಪರೀಕ್ಷೆ, ಇಸಿಜಿ, ಮಧುಮೇಹ ಪರೀಕ್ಷೆ ಹಾಗೂ ಅಗತ್ಯ ಔಷಧಿಗಳನ್ನು ವಿತರಿಸಲಾಗುತ್ತದೆ.ಈ ಕಾರ್ಯಕ್ರಮಕ್ಕೆ ನವಚೇತನ ಯುವಕ ಮಂಡಲ (ರಿ) ಸಂಪ್ಯ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ (ರಿ) ಮುಕ್ರಂಪಾಡಿ, ಐಕ್ಯ ಕಲಾ ಸೇವಾ ಟ್ರಸ್ಟ್ (ರಿ) ಪುತ್ತೂರು, ಮಹಾವೀರ ಆಸ್ಪತ್ರೆ ಪುತ್ತೂರು, ಭಾರತೀಯ ಜನೌಷಧಿ ಕೇಂದ್ರಗಳು ಸೇರಿದಂತೆ ಹಲವು ಸಂಸ್ಥೆಗಳು ಹಾಗೂ ಔಷಧ ಕಂಪನಿಗಳು ಸಹಕಾರ ನೀಡುತ್ತಿವೆ.




ಶ್ರೀ ದೇವರ ಭಕ್ತರು ಈ ಉಚಿತ ವೈದ್ಯಕೀಯ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ವ್ಯವಸ್ಥಾಪನಾ ಸಮಿತಿ ಮನವಿ ಮಾಡಿದೆ








