ಮಂಗಳೂರು: ರಾಕೇಶ್ ಮಲ್ಲಿ, ತಮಗೆ ಮುತ್ತಪ್ಪ ರೈ ಅವರ ಪುತ್ರ ಹಾಗೂ ಸಹಚರರಿಂದ ಕೊಲೆ ಬೆದರಿಕೆ ಇರುವುದಾಗಿ ಪೊಲೀಸ್ ರಕ್ಷಣೆ ಕೋರಿ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಾಕೇಶ್ ಮಲ್ಲಿಯವರಿಗೆ ಜೀವ ಭಯವಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾದ್ಯಮಗಳೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮುತ್ತಪ್ಪ ರೈ ಹಾಗೂ ರಾಕೇಶ್ ಮಲ್ಲಿ ಜೊತೆಯಲ್ಲಿಯೇ ಗುರುತಿಸಿಕೊಂಡಿದ್ದು, ಮುತ್ತಪ್ಪ ರೈ ಅವರ ಕೊನೆಗಾಲದಲ್ಲಿ ಬೇರೆಯಾಗಿದ್ದರು. ಇದೀಗ ಅವರ ಪುತ್ರ ಹಾಗೂ ಸಹಚರರಿಂದಲೇ ತಮಗೆ ಕೊಲೆ ಬೆದರಿಕೆ ಇದೆ. ಜೀವ ಭಯವಿರುವ ಕಾರಣ ತಮಗೆ ಗನ್ ಮ್ಯಾನ್ ರಕ್ಷಣೆ ಕೋರಿ ರಾಕೇಶ್ ಮಲ್ಲಿ ದೂರು ನೀಡಿರುವುದು ಕುತೂಹಲ ಮೂಡಿಸಿದೆ.
ಮುತ್ತಪ್ಪ ರೈ ಮಕ್ಕಳಾದ ರಾಕಿ ರೈ, ರಿಕ್ಕಿ ರೈ, ಬೆಂಗಳೂರು ಭೂಗತ ಪಾತಕಿಗಳಾದ ಸೈಲೆಂಟ್ ಸುನಿಲ್,ರೋಹಿತ್ ಒಂಟೆ ಮತ್ತು, ರಿಕ್ಕಿ ರೈ ಅಂಗರಕ್ಷಕ ವಿಠ್ಠಲ, ಚಾಲಕ ವಿಜಯ್ ಮತ್ತು ಗಿರೀಶ್ ಎಂಬವರ ಕಡೆಯಿಂದ ಕೊಲೆ ಬೆದರಿಕೆಯು ಇರುವುದೆಂದು ರಾಕೇಶ್ ಮಲ್ಲಿ ದೂರು ನೀಡಿದ್ದಾರೆ.
ಒಂದು ಕಾಲದಲ್ಲಿ ಮುತ್ತಪ್ಪ ರೈ ಬಲಗೈ ಬಂಟನಾಗಿ ಗುರುತಿಸಿಕೊಂಡಿದ್ದ ರಾಕೇಶ್ ಮಲ್ಲಿ ಮುತ್ತಪ್ಪ ರೈ ಯವರೊಡನೆ ಜಮೀನಿನ ವಿಚಾರವಾಗಿ ಮುನಿಸಿಕೊಂಡು ಬೇರೆಯಾಗಿದ್ದರು.ಇದೀಗ ರೈಯವರ ಮಕ್ಕಳಿಂದಲೇ ಕೊಲೆ ಬೆದರಿಕೆ ಇರುವುದು ಅಚ್ಚರಿ ಮೂಡಿಸಿದೆ.ಕೆಲವು ದಿನಗಳ ಹಿಂದೆ ರಾಕೇಶ್ ಮಲ್ಲಿಯವರ ಪೊಲೀಸ್ ಗನ್ ಮ್ಯಾನ್ ನ್ನು ಸರಕಾರ ಹಿಂಪಡೆದಿತ್ತು.