ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ ಸರಕಾರ ಆದೇಶ ಹೊರಡಿಸಿದೆ.
ಎಡಿಜಿಪಿ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ರಾಜ್ಯ ಸರಕಾರದ ನಡೆ ಕುತೂಹಲ ಮೂಡಿಸಿದೆ. ವಿಡೀಯೋ ನಕಲಿಯೋ, ಅಸಲಿಯೋ ಎನ್ನುವ ಕುರಿತು ತನಿಖೆ ನಡೆಸಲಾಗುತ್ತದೆಯೋ ಎನ್ನುವ ಕುರಿತು ತನಿಖೆ ನಡೆಸಲಾಗುವುದೋ ಇಲ್ಲವೋ ಎನ್ನುವ ಮಾಹಿತಿ ಆದೇಶದಲ್ಲಿಲ್ಲ. ಕೇವಲ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ರೂಪಿಸಿದವರು ಯಾರು ಎನ್ನುವುದನ್ನು ತಿಳಿಯುವುದಕ್ಕಷ್ಟೆ ತನಿಖೆ ಸೀಮಿತವಾಗಲಿದೆ ಎನಿಸುತ್ತದೆ.
ಮಾ.9ರಂದು ಮಾಜಿ ಮಂತ್ರಿಗಳಾದ ರಮೇಶ್ ಜಾರಕಿಹೊಳಿ ನನಗೆ ಪತ್ರ ಬರೆದು, ಅವರ ವಿರುದ್ಧ ಮಾ.2ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಒಂದು ಅರ್ಜಿ ನೀಡಿದ್ದು, ಅದರಲ್ಲಿ ಅವರ ವಿರುದ್ಧ ರಾಜಕೀಯ ತೇಜೋವಧೆ ಹಾಗೂ ಮಾನಹಾನಿ ಮಾಡುವ ಉದ್ದೇಶವಿದ್ದು ಇದರಲ್ಲಿ ಹಲವಾರು ಜನ ಸೇರಿ ಷಡ್ಯಂತ್ರ ರೂಪಿಸಿರುವಂಥದ್ದು ಬಹಳ ಸ್ಪಷ್ಟವಾಗಿರುತ್ತದೆ ಎಂದು ತಿಳಿಸಿರುತ್ತಾರೆ.
ಈ ಹಿನ್ನೆಲೆಯಲ್ಲಿ ಈ ಷಡ್ಯಂತ್ರವನ್ನು ರೂಪಿಸಿರುವ ಹಾಗೂ ಇದರ ಹಿಂದಿರುವ ವ್ಯಕ್ತಿಗಳ ಬಗ್ಗೆ ಕೂಲಂಕಷವಾಗಿ ವಿಚಾರಣೆಯನ್ನು ಮಾಡಲು ಒಂದು ವಿಶೇಷ ತನಿಖಾ ತಂಡವನ್ನು ರಚನೆ ಮಾಡಲು ಹಾಗೂ ಅದರ ನೇತೃತ್ವವನ್ನು ಸೌಮೇಂದು ಮುಖರ್ಜಿ, ಎಡಿಜಿಪಿ ಇವರಿಗೆ ವಹಿಸುವುದು ಮತ್ತು ಈ ಬಗ್ಗೆ ಸಂಪೂರ್ಣ ವರದಿಯನ್ನು ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ನೀಡುವಂತೆ ಸೂಚಿಸಿದೆ.