ಪುತ್ತೂರು; ಸೆ. 14ರಂದು ಕೆದಂಬಾಡಿ ಗ್ರಾಮದ ತಿಂಗಳಾಡಿಯಲ್ಲಿ ಅಂಗಡಿಯೊಂದರಿಂದ ಹಣ ದೋಚಿದ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಸಫಲರಾಗಿದ್ದು 48 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಅಂಬೊಟ್ಟು ಮನೆ ನೇಜಿಕಾರು ನಿವಾಸಿ ಮೊಹಮ್ಮದ್ ಶಾಫಿ ಎಂದು ಗುರುತಿಸಲಾಗಿದೆ. ತಿಂಗಳಾಡಿಯ ಮಾತೃಶ್ರೀ ಕಾಂಪ್ಲೆಕ್ಸ್ನಲ್ಲಿದ್ದ ಶಿಹಾಬ್ ಎಂಬವರ ಅಂಗಡಿಯಿಂದ ಸೆ. 14ರಂದು ಮಧ್ಯಾಹ್ನ ಬೈಕಿನಲ್ಲಿ ಬಂದ ಯುವಕನೋರ್ವ ಅಲ್ಲಿನ ಡ್ರಾಯರ್ನಲ್ಲಿದ್ದ ಒಂದು ಲಕ್ಷ ರೂ ದೋಚಿ ಪರಾರಿಯಾಗಿದ್ದ.
ಅಂಗಡಿಯ ಮುಂಭಾಗದಲ್ಲಿ ನಿಂತುಕೊಂಡಿದ್ದ ಯುವಕ ಅಂಗಡಿ ಮಾಲಕ ಗೋದಾಮಿಗೆ ತೆರಳಿದಾಗ ಕೃತ್ಯ ನಡೆಸಿದ್ದ. ಬೈಕಿನಲ್ಲಿ ಬಂದಿದ್ದ ಆರೋಪಿ ಹಣ ದೋಚಿ ಪರಾರಿಯಾಗಿದ್ದ. ಘಟನೆಯ ಬಗ್ಗೆ ಅಂಗಡಿ ಮಾಲಕ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಆತನು ದೋಚಿರುವ ನಗದನ್ನು ವಶಕ್ಕೆ ಪಡೆದಿದ್ದಾರೆ.
ತನಿಖಾ ತಂಡದಲ್ಲಿ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರು ಮತ್ತು ಪುತ್ತೂರು ಗ್ರಾಮಾಂತರ ಠಾಣೆ, ಉಪ್ಪಿನಂಗಡಿ ಠಾಣೆ, ಪುತ್ತೂರು ಗ್ರಾಮಾಂತರ ವೃತ್ತ ಕಛೇರಿ, ಡಿ.ಸಿ.ಐ.ಬಿ. ವಿಭಾಗದ ಸಿಬ್ಬಂದಿಗಳನ್ನೊಳಗೊಂಡ ತನಿಖಾ ತಂಡವು ಆರೋಪಿಯನ್ನು ಬಂಧಿಸುವಲ್ಲಿ ಕಾರ್ಯಪೃವೃತ್ತರಾಗಿದ್ದರು.
ಆರೋಪಿಯಿಂದ ಕಳವಾಗಿದ್ದ ರೂ,100,000/- ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು 60,000/- ರೂಪಾಯಿ ಮೌಲ್ಯದ KA21 U 6006 ನೇ ಮೋಟಾರ್ ಸೈಕಲನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.
ಆರೋಪಿ ಮಹಮ್ಮದ್ ಶಾಫಿಯ ವಿರುದ್ಧ ಬೆಳ್ತಂಗಡಿ, ಪುತ್ತೂರು ನಗರ, ವಿಟ್ಲ, ಕಾರ್ಕಳ ಗ್ರಾಮಾಂತರ, ಉಡುಪಿ ನಗರ, ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಒಟ್ಟು 12 ಪ್ರಕರಣಗಳು ದಾಖಲಾಗಿರುತ್ತವೆ.