ಬೆಂಗಳೂರು: ಸಾರಿಗೆ ನೌಕರರ ಜೊತೆಗಿನ ರಾಜ್ಯ ಸರ್ಕಾರದ ಸಂಧಾನ ಸಭೆ ಸಫಲವಾಗಿದೆ. ರಾಜ್ಯಾದ್ಯಂತ ಸಾರಿಗೆ ಸಿಬ್ಬಂದಿ ಮುಷ್ಕರ ವಿಚಾರವಾಗಿ ವಿಕಾಸ ಸೌಧದಲ್ಲಿ ಸಾರಿಗೆ ಸಚಿವರು ಆದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನೇತೃತ್ವದಲ್ಲಿ ನಡೆದ ಸಭೆ ಯಶಸ್ವಿಯಾಗಿದೆ. ತಮ್ಮನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು ಎಂಬುದೂ ಸೇರಿದಂತೆ ಪ್ರತಿಭಟನಾಕಾರರು 10-12 ಬೇಡಿಕೆಗಳನ್ನು ಮುಂದಿಟ್ಟಿದ್ದರು. ಇದರಲ್ಲಿ ಕೆಲವು ಬೇಡಿಕೆಗಳಿಗೆ ಸರಕಾರ ಅಸ್ತು ಎಂದ ಹಿನ್ನೆಲೆಯಲ್ಲಿ ನೌಕರರ ಮುಷ್ಕರ ಅಂತ್ಯಗೊಂಡಿದೆ.
ಸಾರಿಗೆ ಸಂಸ್ಥೆಗಳ ನೌಕರರ ಹತ್ತು ಬೇಡಿಕೆಗಳ ಪೈಕಿ ಹಣಕಾಸಿನ ಇತಿಮಿತಿಯಲ್ಲಿ ಸಾಧ್ಯವಿರುವ ಬೇಡಿಕೆಗಳನ್ನು ಈಡೇರಿಸುವುದಾಗಿ ಸರಕಾರ ಭರವಸೆ ನೀಡಿದ ಮೇಲೆ ಮುಷ್ಕರ ಹಿಂದಕ್ಕೆ ಪಡೆಯುವ ನಿರ್ಧಾರಕ್ಕೆ ಬರಲಾಗಿದೆ.
ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಗಿದೆ. 2020 ಜನವರಿಯಿಂದ ವೇತನ ಪರಿಷ್ಕರಣೆ, ನೌಕರರಿಗೆ ಕಿರುಕುಳ ತಡೆಯುವುದು, ಕೋವಿಡ್ ನಿಂದ ಮೃತಪಟ್ಟ ಕುಟುಂಬಕ್ಕೆ 30 ಲಕ್ಷ ಪರಿಹಾರ ಸೇರಿದಂತೆ ಸಮಿತಿ ವರದಿ, ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಸರ್ಕಾರ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಆದರೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ಸಭೆಯಲ್ಲಿ ಸರ್ಕಾರ ಸ್ಪಷ್ಟಪಡಿಸಿದೆ.