ಮಂಗಳೂರು: ವಿಶ್ವಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಕುರಿತಾಗಿ ವಾಟ್ಸಪ್ ಗ್ರೂಪ್ ಸಹಿತ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಸಂದೇಶ ರವಾನಿಸುತ್ತಿರುವ ಪುತ್ತೂರಿನ ಹಕೀಂ ಕೂರ್ನಡ್ಕ ಸಹಿತ ಹಲವರ ವಿರುದ್ಧ ವಿಶ್ವಹಿಂದೂ ಪರಿಷದ್ ಮತ್ತು ಬಜರಂಗದಳದ ನಾಯಕರು ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ರವರಿಗೆ ದೂರು ಸಲ್ಲಿಸಿದ್ದಾರೆ.
ಪೊಲೀಸ್ ಕಮೀಷನರ್ ಸೂಚನೆಯಂತೆ ಮಂಗಳೂರು ಕದ್ರಿ ಪೊಲೀಸ್ ಠಾಣೆಯಲ್ಲಿ ಹಕೀಂ ಕೂರ್ನಡ್ಕ ಸಹಿತ ಹಲವರ ವಿರುದ್ಧ ಕೇಸು ದಾಖಲಾಗಿದೆ.
ಈ ಹಿಂದೆ ಬಜರಂಗದಳದಲ್ಲಿದ್ದು ಪ್ರಸ್ತುತ ವಿಶ್ವಹಿಂದೂ ಪರಿಷದ್ನ ಮಂಗಳೂರು ವಿಭಾಗ ಕಾರ್ಯದರ್ಶಿಯಾಗಿರುವ ಶರಣ್ ಪಂಪ್ವೆಲ್ರವರ ಬಗ್ಗೆ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ.
ವಾಟ್ಸಪ್ ಸಹಿತ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಶರಣ್ ಪಂಪ್ವೆಲ್ರವರ ಬಗ್ಗೆ ಅವಹೇಳನಕಾರಿ ಸಂದೇಶ ರವಾನಿಸಲಾಗುತ್ತಿದೆ. ಅಲ್ಲದೆ ವಿಶ್ವಹಿಂದೂ ಪರಿಷದ್ ಮತ್ತು ಬಜರಂಗದಳದ ಅಂಗ ಸಂಸ್ಥೆಯಾಗಿರುವ ದುರ್ಗಾವಾಹಿನಿಯ ಸದಸ್ಯೆಯರ ಮೇಲೆ ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನು ಮಾಡಿ ಸಂದೇಶ ರವಾನೆಯಾಗುತ್ತಿದೆ.
ಈ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡರಾದ ಜಗದೀಶ ಶೇಣವ, ಶಿವಾನಂದ ಮೆಂಡನ್ ಮತ್ತು ಪ್ರದೀಪ್ ಸರಿಪಳ್ಳರವರ ನೇತೃತ್ವದ ನಿಯೋಗ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ರವರನ್ನು ಭೇಟಿಯಾಗಿ ದೂರು ಸಲ್ಲಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿದೆ. ಶರಣ್ ಪಂಪ್ವೆಲ್ ಸಹಿತ ಹಿಂದೂ ಸಂಘಟನೆಯ ಪ್ರಮುಖರನ್ನು ಗುರಿಯಾಗಿಟ್ಟುಕೊಂಡು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಕೋಟೆಕಾರ್ ಬೀರಿಯ ನೌಶಾದ್ ಪನ, ವಿಷ್ಣುದರ್ಶನ್ ಶೆಟ್ಟಿ, ಜಯಕುಮಾರ್, ಸಿ.ಎಂ.ಹಕೀಂ, ಭವಾನಿ ಶಂಕರ್ ಬಿ, ಸಿದ್ದೀಕ್, ಜಗ್ಗ ಕರೆಕೋಡಿ, ಲೋಲಾಕ್ಷ ಕೈಕಂಬ ಎಂಬವರುಗಳು ಅಪಪ್ರಚಾರ, ಮಾನಹಾನಿ ಮಾಡುತ್ತಿದ್ದಾರೆ.
ಇವರೊಂದಿಗೆ ಪುತ್ತೂರಿನ ಹಕೀಂ ಕೂರ್ನಡ್ಕ ಎಂಬಾತನೂ ವಾಟ್ಸಪ್ ಗ್ರೂಪ್ ಸಹಿತ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುತ್ತಿರುವ ಬಗ್ಗೆ ದೂರು ನೀಡಲಾಗಿದೆ. ದೂರು ಸ್ವೀಕರಿಸಿರುವ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ರವರು ಪ್ರಕರಣ ದಾಖಲಿಸುವಂತೆ ಕದ್ರಿ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ನಿಟ್ಟಿನಲ್ಲಿ ದುರ್ಗಾವಾಹಿನಿಯ ಜಿಲ್ಲಾ ಸಂಚಾಲಕಿ ಸುಕನ್ಯ ರಾವ್ ನೀಡಿದ ದೂರಿನಂತೆ ಹಕೀಂ ಸಹಿತ ಹಲವರ ವಿರುದ್ಧ ಕೇಸು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಶರಣ್ ಪಂಪ್ವೆಲ್ರವರ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಿರುವವರ ವಿರುದ್ಧ ಮಂಗಳೂರು ಈಸ್ಟ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಕಮೀಷನರ್ ಶಶಿಕುಮಾರ್ ತಿಳಿಸಿದ್ದಾರೆ.