ಶಿಮ್ಲಾ: ಟ್ರಕ್ಕಿಂಗ್ನಲ್ಲಿ ಹಿಮಪಾತದಿಂದ ಸಾವನ್ನಪ್ಪಿದ ಬಾಲಕರ ಬಳಿ ಪಿಟ್ಬುಲ್ ನಾಯಿಯೊಂದು ಊಟ, ನೀರಿಲ್ಲದೇ 4 ದಿನ ಕುಳಿತಿದ್ದ ಮನಕಲುಕುವ ದೃಶ್ಯವೊಂದು ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಭರ್ಮೋರ್ ಪ್ರದೇಶದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮೃತರನ್ನು ಪಿಯೂಷ್ ಕುಮಾರ್ (13) ಹಾಗೂ ವಿಕ್ಷಿತ್ ರಾಣಾ (19) ಎಂದು ಗುರುತಿಸಲಾಗಿದೆ. ವಿಕ್ಷಿತ್ ತಮ್ಮ ಪಿಟ್ಬುಲ್ ನಾಯಿಯನ್ನು ಜೊತೆಗೆ ಕರೆದುಕೊಂಡು ಹೋಗಿದ್ದರು ಎಂದು ತಿಳಿಸಲಾಗಿದೆ.



ಜ.22ರಂದು ವಿಡಿಯೋ ರೆಕಾರ್ಡಿಂಗ್ಗಾಗಿ ಬಾಲಕರು ಭರ್ಮಣಿ ಮಾತಾ ದೇವಾಲಯ ಕಡೆಗೆ ತೆರಳಿದ್ದರು. ಈ ವೇಳೆ ಭಾರೀ ಹಿಮಪಾತದಲ್ಲಿ ಇಬ್ಬರು ಸಿಲುಕಿ, ಕುಟುಂಬಸ್ಥರೊಂದಿಗೆ ಸಂಪರ್ಕ ಕಳೆದುಕೊಂಡರು. ಬಳಿಕ ರಾಜ್ಯ ವಿಪತ್ತು ನಿರ್ವಹಣಾ ಪಡೆ ಹಾಗೂ ಸೇನಾ ಹೆಲಿಕಾಪ್ಟರ್ಗಳು ಇಬ್ಬರ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದು, 2-3 ದಿನಗಳ ಕಾಲ ನಿರಂತರ ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಲೇ ಇಲ್ಲ, ಜ.26ರಂದು ಎರಡು ಪಡೆಗಳ ಮೂಲಕ ಕಾರ್ಯಾಚರಣೆಯನ್ನು ಪುನಾರಂಭಿಸಿದರು. ಬೆಳಿಗ್ಗೆ 9:30ರ ಸುಮಾರಿಗೆ ವಿಕ್ಷಿತ್ನ ಶವ ಪತ್ತೆಯಾಯಿತು. ಬಳಿಕ ಮಧ್ಯಾಹ್ನ 1:35ರ ಸುಮಾರಿಗೆ ಪಿಯೂಷ್ನ ಮೃತದೇಹ ಪತ್ತೆಯಾಯಿತು. ಈ ವೇಳೆ ಜೊತೆಗೆ ಕರೆದುಕೊಂಡು ಹೋಗಿದ್ದ ಪಿಟ್ಬುಲ್ ನಾಯಿ ಪಿಯೂಷ್ ಶವದ ಬಳಿ ಕುಳಿತಿದ್ದ ದೃಶ್ಯ ಕಂಡು ಮನಕಲುಕುವಂತಿತ್ತು. ಸತತ 96 ಗಂಟೆಗಳ ಕಾಲ ಅಂದರೆ 4 ದಿನ ಊಟ, ನೀರಲ್ಲದೇ ಅಲ್ಲೇ ಇತ್ತು ಎಂದು ವರದಿ ಮೂಲಕ ತಿಳಿದು ಬಂದಿದೆ.
ಆನಂತರ ನಾಯಿ ಹಾಗೂ ಮೃತದೇಹಗಳನ್ನು ವಿಮಾನದ ಮೂಲಕ ಭರ್ಮೋರ್ಗೆ ಸಾಗಿಸಲಾಯಿತು. ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ನಾಯಿಯನ್ನು ವಿಕ್ಷಿತ್ ರಾಣಾ ಕುಟುಂಬಸ್ಥರಿಗೆ ಹಿಂದಿರುಗಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.








