ಶಿವಮೊಗ್ಗ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಯನ್ನು ಬಂಧಿಸಿದ ಘಟನೆ ಶಿವಮೊಗ್ಗದ ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಅಪ್ರಾಪ್ತ ಬಾಲಕಿಯಾಗಿದ್ದಾಳೆ. ಎರಡು ವರ್ಷಗಳ ಹಿಂದೆ ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿಯನ್ನು ನೋಡಿಕೊಳ್ಳಲು ಬಂದಿದ್ದಳು. ಈ ಸಂದರ್ಭದಲ್ಲಿ ಆಸ್ಪತ್ರೆಯ ಸಮೀಪ ಹಣ್ಣು ಮಾರಾಟ ಮಾಡುತ್ತಿದ್ದ 25 ವರ್ಷದ ವ್ಯಕ್ತಿಯೋರ್ವ ತನ್ನನ್ನು ಪ್ರೀತಿಸುವಂತೆ ಬಾಲಕಿಗೆ ಕೋರಿದ್ದಾನೆ. ಆದರೆ ಆಕೆ ನಿರಾಕರಿಸಿದ್ದಾಳೆ.
ತಾಯಿಯ ಆರೋಗ್ಯ ಸುಧಾರಿಸಿದ ಬಳಿಕ ಊರಿಗೆ ಮರಳಿದ ಕೆಲದಿನಗಳಲ್ಲೇ ಆಕೆಯ ತಾಯಿ ಮೃತಪಟ್ಟಿದ್ದಾರೆ. ಬಾಲಕಿಗೆ ಸಂಬಂಧಿಕರು ಮದುವೆ ಮಾಡಲು ಮುಂದಾಗಿದ್ದಾಗ ಬಾಲಕಿ ಶಿವಮೊಗ್ಗದಲ್ಲಿ ಪರಿಚಿತನಾಗಿದ್ದ ಆರೋಪಿಗೆ ಫೋನ್ ಮಾಡಿ ಸಮಸ್ಯೆ ಹೇಳಿಕೊಂಡು ರಕ್ಷಣೆಗಾಗಿ ಮನವಿ ಮಾಡಿದ್ದಾಳೆ.
ಇದನ್ನೂ ಓದಿ: ಹಾಕಿಯಲ್ಲಿ ಮುಗ್ಗರಿಸಿದ ಭಾರತೀಯ ಪಡೆ; ಮುಂದೆ ಕಂಚಿಗಾಗಿ ಸೆಣಸಾಟ
ಆರೋಪಿ ಬಾಲಕಿಯನ್ನು ಶಿವಮೊಗ್ಗಕ್ಕೆ ಕರೆಸಿಕೊಂಡು ಮದುವೆಯಾಗಿದ್ದು, ಆತ ಶರಾವತಿ ನಗರದ ಮನೆಯಲ್ಲಿ ಇರಿಸಿಕೊಂಡಿದ್ದನು.ಈ ಮಾಹಿತಿ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಪೊಲೀಸರು ದಾಳಿಮಾಡಿ ಬಾಲಕಿಯನ್ನು ರಕ್ಷಿಸಿದ್ದಾರೆ.
ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.ಆತನ ವಿರುದ್ಧ ಪೋಕ್ಸೋ ಕಾಯ್ದೆ, ಅತ್ಯಾಚಾರ, ಬಾಲ್ಯವಿವಾಹ ನಿರ್ಬಂಧ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಅಪ್ರಾಪ್ತ ಬಾಲಕಿಯನ್ನು ರಕ್ಷಿಸಲಾಗಿದೆ.