ಶಿವಮೊಗ್ಗ: ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ ಹೆಚ್ಚು ಕಡಿಮೆ ದೆಹಲಿಯ ನಿರ್ಭಯಾ ಪ್ರಕರಣ ಹೋಲುತ್ತಿರುವ ಶಿವಮೊಗ್ಗದ ಸಾಮೂಹಿಕ ಅತ್ಯಾಚಾರ ಪ್ರಕರಣದ ಎಲ್ಲ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಎಲ್ಲರೂ 25 ವರ್ಷದ ಒಳಗಿನವರಾಗಿದ್ದಾರೆ ಎಂದು ವರದಿಯಾಗಿದೆ.
ಶಿವಮೊಗ್ಗದಲ್ಲಿ ಗಲಭೆ ಹಿನ್ನೆಲೆಯಲ್ಲಿ ಕರ್ಫ್ಯೂ ಹೇರಲಾಗಿದ್ದರಿಂದ ನಗರದಲ್ಲಿ ಅಂದು ಊಟ ದೊರೆತಿರಲಿಲ್ಲ. ಈ ವೇಳೆ ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿದ್ದ ತಾಯಿಗೆ ಹೊರಗಡೆಯಿಂದ ಊಟ ತರಲು ಬೈಕ್ ನಲ್ಲಿ ಹೋಗಿದ್ದ ಬಾಲಕಿಯ ಮೇಲೆ ಕಿರಾತಕರು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ವಾರ್ಡ್ ಬಾಯ್ ಮನೋಜ್ ಮತ್ತು ಆತನ ಮೂವರು ಸ್ನೇಹಿತರನ್ನು ಬಂಧಿಸಲಾಗಿದೆ. ಮನೋಜ್ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದ. ಆರೋಪಿಗಳನ್ನು ಪ್ರಜ್ವಲ್ , ವಿನಯ್ ಮತ್ತು ಸಂದೀಪ್ ಎಂದು ಗುರುತಿಸಲಾಗಿದೆ.
ಬೈಕ್ ನಲ್ಲಿ ಬಾಲಕಿಯನ್ನು ಕರೆ ತಂದ ಮನೋಜ್ ಬಳಿಕ ಶಿವಮೊಗ್ಗ ಹೊರವಲಯದಲ್ಲಿ ವ್ಯಾನ್ ನಲ್ಲಿ ಅತ್ಯಾಚಾರ ನಡೆಸಿದ್ದ ಎಂದು ಆರೋಪಿಸಲಾಗಿದೆ. ಬಳಿಕ ಆತನ ಸ್ನೇಹಿತರು ಕೂಡ ಮೃಗೀಯ ರೀತಿಯಲ್ಲಿ ಅಪ್ರಾಪ್ತೆಯನ್ನು ಹಿಂಸಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಿಪಿಐ ಅಭಯ ಪ್ರಕಾಶ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.