ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದು, ಆಕೆಯ ಮೃತದೇಹವನ್ನು ನೇಣಿಗೆ ಹಾಕಿ, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಹೋಗಿ ವಿಫಲನಾದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹೌಸಿಂಗ್ ಬೋರ್ಡ್ ಎಂಬಲ್ಲಿ ನಡೆದಿದೆ.
ಗುರುರಾಜ್ ಎಂಬಾತ ಈ ಕೊಲೆಗಾರ. ಆತ ತನ್ನ ಪತ್ನಿಯ ಹೇಮಾವತಿ (28)ಯನ್ನು ಕೊಂದು ತಪ್ಪಿಸಿಕೊಳ್ಳಲು ಯತ್ನಿಸಿ ವಿಫಲನಾಗಿದ್ದಾನೆ. ಚನ್ನರಾಯಪಟ್ಟಣದ ಗುರುರಾಜ್ ಹತ್ತು ವರ್ಷಗಳ ಹಿಂದೆ ಚಿಕ್ಕಮಗಳೂರು ಮೂಲದ ಹೇಮಾವತಿ (28) ಅವರನ್ನು ಮದುವೆಯಾಗಿದ್ದ. ಮದುವೆಯಾದ ವರ್ಷದಿಂದಲೂ ಆತ ವರದಕ್ಷಿಣೆ ಹೆಸರಿನಲ್ಲಿ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಹಲವಾರು ಬಾರಿ ಮನೆಯವರು ಮಾತುಕತೆ ನಡೆಸಿದ್ದರು. ಆದರೆ, ಕಿರುಕುಳ ನೀಡುವ ತನ್ನ ಚಾಳಿಯನ್ನು ಆತ ನಿಲ್ಲಿಸಿರಲಿಲ್ಲ.
ಗುರುವಾರ ಈತ ತನ್ನ ಇಬ್ಬರು ಮಕ್ಕಳನ್ನು ಸಂಬಂಧಿಕರ ಮನೆಗೆ ಕಳುಹಿಸಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಪತ್ನಿಯ ಜತೆ ಜಗಳ ಆರಂಭಿಸಿ ಕೊನೆಗೆ ಕೊಲೆ ಮಾಡಿದ್ದ. ಕೊಲೆ ಮಾಡಿದ ನಂತರವೂ ಈತ ಎಷ್ಟೊಂದು ಬುದ್ಧಿವಂತಿಕೆ ಮೆರೆದಿದ್ದಾನೆ ಎಂದರೆ, ಹತ್ಯೆ ಮಾಡಿದ ಬಳಿಕ ಆತ ಮೃತದೇಹವನ್ನು ನೇತು ಹಾಕಿದ್ದಲ್ಲದೆ, ನನ್ನ ಹೆಂಡತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ಠಾಣೆಗೆ ಫೋನ್ ಮಾಡಿದ್ದಾನೆ.
ಕೂಡಲೇ ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರಿಗೆ ಗುರುರಾಜನ ಮೇಲೆಯೇ ಸಣ್ಣಗೆ ಸಂಶಯ ಬರಲು ಆರಂಭಿಸಿತ್ತು. ಅವರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಹೊರಗೆ ಬಿದ್ದಿದೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.