ಧರ್ಮಸ್ಥಳ: 11ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆಗೆ ನ್ಯಾಯ ಸಿಗಬೇಕೆಂದು ವಿಶ್ವ ಹಿಂದೂ ಪರಿಷತ್, ಭಜರಂಗದಳ ಧರ್ಮಸ್ಥಳದಲ್ಲಿ ಆಯೋಜಿಸಿರುವ ಪಾದಯಾತ್ರೆಯಲ್ಲಿ ಭಾರೀ ಜನಸ್ತೋಮವೇ ಸೇರಿದ್ದು ಸೌಜನ್ಯ ತಾಯಿ ಕುಸುಮಾವತಿ ಭಾಗವಹಿಸಿದ್ದಾರೆ.
ಇದೇ ವೇಳೆ ಸೌಜನ್ಯ ತಾಯಿಯವರು ಆರೋಪ ಮಾಡಿರುವ ಧೀರಜ್ ಕೆಲ್ಲ, ಮಲ್ಲಿಕ್ ಜೈನ್, ಉದಯ್ ರವರು ಸಾಮಾಜಿಕ ಜಾಲತಾಣದಲ್ಲಿ ನಾವು ನಿಮ್ಮಗಾಗಿ ಅಣ್ಣಪ್ಪ ಬೆಟ್ಟದ ಬಳಿ ಕಾಯುತ್ತಿರುತ್ತೇವೆ ಎಂಬ ಸಂದೇಶ ಹಾಕಿ, ಈ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲವೆಂದು ಅಣ್ಣಪ್ಪ ಸ್ವಾಮಿಯ ಮುಂದೆ ಅಣೆ ಪ್ರಮಾಣ ಮಾಡುವುದಾಗಿ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಆಣೆ ಪ್ರಮಾಣದ ಬದಲಾಗಿ ಅಣ್ಣಪ್ಪ ಸನ್ನಿಧಿಯಲ್ಲಿ ಮೂವರು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಾತನಾಡಿದ ಧೀರಜ್ ಕೆಲ್ಲ, ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ದೇವರ ಮುಂದೆಯೇ ನಾವು ಪ್ರಮಾಣ ಕೈಗೊಂಡಿದ್ದೇವೆ. ನಾವು ನಿರ್ದೋಷಿಗಳೆಂದು ಸಾಬೀತಾಗಿದೆ. ನಮಗೂ ಕುಟುಂಬ, ಬಂಧುವರ್ಗವಿದೆ. ಆದರೆ ವಿನಾಕಾರಣ ನಮ್ಮ ಹೆಸರನ್ನು ಸಮಾಜದಲ್ಲಿ ಹಾಳುಗೆಡವಲಾಗುತ್ತಿದೆ. ಇದಕ್ಕೆ ದೇವರೆ ತಕ್ಕ ಶಿಕ್ಷೆ ನೀಡಬೇಕು. ನಾವು ಈ ಹಿಂದೆ ಕಾನತ್ತೂರಿಗೂ ತೆರಳಿ ಪ್ರಾರ್ಥನೆ ಮಾಡಿದ್ದೇವೆ ಎಂದು ಹೇಳಿದರು.ನಾವು ಯಾವುದೇ ತಪ್ಪು ಮಾಡಿಲ್ಲ.ನಮ್ಮ ಮೇಲೆ ಆರೋಪ ಮಾಡುವವರಿಗೆ ದೇವರು ಸರಿಯಾದ ಶಿಕ್ಷೆ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಪಾದಯಾತ್ರೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ, ಬಜರಂಗದಳದ ಮುಖಂಡ ಮುರಳಿಕೃಷ್ಣ ಹಸಂತಡ್ಕ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಬೆಟ್ಟದ ಮುಂಭಾಗ ಧರ್ಮಸ್ಥಳದ ನಾಗರೀಕರು ಹಾಗೂ ಭಕ್ತರು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದಾರೆ. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಟ್ಟದ ಸುತ್ತ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಘಟನೆಯ ಗಂಭೀರತೆಯನ್ನು ಅರಿತಿರುವ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ರಿಶ್ಯಂತ್ ದೌಡಾಯಿಸಿ ಕಾನೂನು ಸುವ್ಯವಸ್ಥೆಯ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ.