ಮಂಗಳೂರು: ‘ಬಂಟರ ಬ್ರಿಗೇಡ್’ ಎನ್ನುವ ಸಂಘಟನೆ ಹೆಸರಿನಲ್ಲಿ ಕರಪತ್ರ ಹಂಚಿ ಅಪಪ್ರಚಾರ, ತಪ್ಪು ಮಾಹಿತಿ ಹಬ್ಬಿದ ಮತ್ತು ಜಾತಿ ವೈಷಮ್ಯ ಮೂಡಿಸಲು ಯತ್ನಿಸಿದ ಆರೋಪದಡಿಯಲ್ಲಿ ಕಾಂಗ್ರೇಸ್ ವಿರುದ್ಧ ಚುನಾವಣಾಧಿಕಾರಿಗಳಿಗೆ ಬಿಜೆಪಿ ದೂರು ನೀಡಿದೆ.
ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟರ ಬಗ್ಗೆ ಯಾವುದೇ ಅಸ್ತಿತ್ವವಿಲ್ಲದ ‘ಬಂಟರ ಬ್ರಿಗೇಡ್’ ಎನ್ನುವ ಸಂಘಟನೆ ರಪತ್ರ ಮುದ್ರಿಸಿ, ಆಕ್ಷೇಪಾರ್ಹ ವಿಚಾರಗಳನ್ನು ಬರೆದು ಜಾತಿಗಳ ನಡುವೆ ದ್ವೇಷ ಹಬ್ಬಿಸುವ ಯತ್ನ ನಡೆದಿದ್ದು, ಬಿಜೆಪಿ ಕಾನೂನು ಪ್ರಕೋಷ್ಠ ಜಿಲ್ಲಾ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದೆ. ಕರಪತ್ರದಲ್ಲಿ ಬ್ರಿಜೇಶ್ ಚೌಟರ ಭಾವಚಿತ್ರ ಬಳಸಿ ಆಕ್ಷೇಪಾರ್ಹ ವಿಚಾರಗಳನ್ನು ಮುದ್ರಿಸಿ, ಕರಪತ್ರವನ್ನು ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಜಾತಿಗಳ ನಡುವೆ ದ್ವೇಷ ಬಿತ್ತಿ ಅದರ ದುರ್ಲಾಭವನ್ನು ಕಾಂಗ್ರೇಸ್ ಪಕ್ಷ ಪಡೆಯುತ್ತಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಕಾನೂನು ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕ ದೇವಿಪ್ರಸಾದ್ ಸಾಮಾನಿ ಒತ್ತಾಯಿಸಿದ್ದಾರೆ.
ಬಂಟ ಬ್ರಿಗೇಡ್ ಎನ್ನುವ ಯಾವುದೇ ಸಂಸ್ಥೆ ಅಸ್ತಿತ್ವದಲ್ಲಿಲ್ಲ. ಅಂತಹ ಸಂಸ್ಥೆ ಹೆಸರಲ್ಲಿ ಯಾವುದೇ ಕಾರ್ಯ ಚಟುವಟಿಕೆ ನಡೆಸುವುದು ಇಲ್ಲಿಯ ವರೆಗೆ ಎಲ್ಲಿಯೂ ಕಂಡುಬಂದಿಲ್ಲ. ಚುನಾವಣೆಗೆ ಎರಡು ದಿನ ಇರುವಾಗ ಮತದಾರರಿಗೆ ಪ್ರಭಾವ ಬೀರುವ ಉದ್ದೇಶದಿಂದ ಈ ರೀತಿಯ ಕೃತ್ಯ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇಂತಹ ವಿಚಾರಗಳನ್ನು ಹರಡಿ ಚುನಾವಣೆಯಲ್ಲಿ ಗೆಲ್ಲಲು ಯತ್ನಿಸುತ್ತಿದ್ದಾರೆ. ಇಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಅಧಿಕಾರಿಯಲ್ಲಿ ಒತ್ತಾಯಿಸಿದ್ದಾರೆ.