ಕಾಲೇಜಿಗೆ ಹೋಗುತ್ತಿದ್ದ ಯುವತಿಯೊಬ್ಬಳನ್ನು ಕಾಲೇಜಿನ ಆವರಣದಲ್ಲೇ ಪಾಗಲ್ ಪ್ರೇಮಿ ಚೂರಿಯಿಂದ ಇರಿದು ಬಳಿಕ ಆಕೆಯನ್ನು ಕಾರಿನಲ್ಲಿ ಎತ್ತಾಕಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ ಘಟನೆ ರಾಮನಗರದಲ್ಲಿ ನಡೆದಿದೆ.
ರಾಮನಗರದ ಮಹಿಳಾ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿ ಸಂಜನಾ ಎಂದಿನಂತೆ ಬೆಳಗ್ಗೆ ಸಹಪಾಠಿಗಳ ಜತೆ ಕಾಲೇಜಿಗೆ ಆಗಮಿಸಿದ್ದಳು. ಅದೇ ಸಮಯಕ್ಕೆ ಕಾಲೇಜಿನ ಆವರಣಕ್ಕೆ ಇನೋವಾ ಕಾರಿನಲ್ಲಿ ತಂಡವೊಂದು ಬಂದಿದ್ದು, ತಂಡದಲ್ಲಿದ್ದ ಒಬ್ಬ ಯುವಕ ಕಾರಿನಿಂದ ಇಳಿದು ಸಂಜನಾಗೆ ಚಾಕುವಿನಿಂದ ಇರಿದಿದ್ದಾನೆ. ಸಂಜನಾ ಚೂರಿ ಇರಿತಕ್ಕೆ ತತ್ತರಿಸಿ ಕೆಳಗೆ ಬೀಳುತ್ತಿದ್ದಂತೆಯೇ ಯುವಕ ಆಕೆಯನ್ನು ನೇರವಾಗಿ ಕಾರಿಗೆ ಎತ್ತಾಕಿಕೊಂಡಿದ್ದು, ಕಾರು ಅಲ್ಲಿಂದ ಪರಾರಿಯಾಗಿದೆ.
ಇದೇ ದುಷ್ಕರ್ಮಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದು ಅಲ್ಲಿಂದ ಪರಾರಿಯಾಗುವ ಪ್ರಯತ್ನದಲ್ಲಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ
ಚೂರಿಯಿಂದ ಇರಿದ ದುಷ್ಟನನ್ನು ಡಿ.ಎನ್ ಚೇತನ್ ಎಂದು ಗುರುತಿಸಲಾಗಿದ್ದು, ಆತನ ಒಬ್ಬ ಪಾಗಲ್ ಪ್ರೇಮಿ ಎನ್ನಲಾಗಿದೆ. ಈತ ಕನಕಪುರದ ದಾಳಿಂಬ ಗ್ರಾಮದವನು. ಈ ನಡುವೆ ಚೂರಿ ಇರಿತ ಮತ್ತು ಅಪಹರಣದ ಘಟನೆಯಿಂದ ಕಾಲೇಜು ಆವರಣ ಬೆಚ್ಚಿ ಬಿದ್ದಿದೆ.