



ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ತಾಯಿ ಹಾಗೂ ಮಗು ಕೆರೆಗೆ ಹಾರಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ದೂರುದಾರರಾದ ರುಕ್ಮಯ್ಯ ಗೌಡ (66), ಪುತ್ತೂರು ತಾಲೂಕು, ಅವರು ನೀಡಿದ ದೂರಿನಂತೆ, ಅವರ 34 ವರ್ಷದ ಮಗಳು ತನ್ನ ಮೂರು ವರ್ಷದ ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿದ ಘಟನೆ ಸಂಭವಿಸಿದ್ದು, ಈ ಕುರಿತು ದಿನಾಂಕ 4.1.2026 ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮ ಸಂಖ್ಯೆ 01/2026 ಅನ್ನು ಕಲಂ 103 BNS–2023ರಂತೆ ದಾಖಲಿಸಲಾಗಿದೆ.

ಇನ್ನೊಂದೆಡೆ, ಮೃತ ಮಹಿಳೆಯ ತಾಯಿ ರತ್ನಾವತಿ (55), ಪುತ್ತೂರು ತಾಲೂಕು, ಅವರು ತಮ್ಮ ಮಗಳ ಮರಣದಲ್ಲಿ ಸಂಶಯವಿದೆ ಎಂದು ಆರೋಪಿಸಿ ಪ್ರತ್ಯೇಕ ದೂರು ನೀಡಿದ್ದಾರೆ. ಈ ದೂರಿನ ಅನ್ವಯ, ದಿನಾಂಕ 4.1.2026 ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಸಂಖ್ಯೆ 01/2026 ಅನ್ನು ಕಲಂ 194(3)(i)(iv) BNSS–2023 ರಂತೆ ದಾಖಲಿಸಲಾಗಿದೆ.
ತಾಯಿ–ಮಗು ಸಾವಿನ ಹಿನ್ನೆಲೆ, ಘಟನೆ ಆತ್ಮಹತ್ಯೆಯೇ ಅಥವಾ ಇತರೆ ಕಾರಣಗಳಿಂದ ಸಂಭವಿಸಿತೇ ಎಂಬ ಅಂಶಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಸ್ಥಳ ಪರಿಶೀಲನೆ, ಸಾಕ್ಷಿಗಳ ಹೇಳಿಕೆ ಸಂಗ್ರಹಣೆ ಹಾಗೂ ಇತರೆ ಅಗತ್ಯ ತನಿಖಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದ ಎಲ್ಲಾ ಅಂಶಗಳ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದ್ದು, ತನಿಖೆಯ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.








