ಸುಳ್ಯ: ಅಕ್ರಮ ನಾಡಕೋವಿ ತಯಾರಿಸಿ ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ 4 ಆರೋಪಿಗಳಿಗೆ ಪುತ್ತೂರು ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ದೊರೆತಿದೆ.
ಪ್ರಕರಣದ ಆರೋಪಿಗಳಾದ ದಿವಾಕರ ಆಚಾರ್ಯ, ಅಶೋಕ, ಚಂದನ್, ಕಾರ್ತಿಕ್ ಹಾಗೂ ಲೋಹಿತ್ ಬಂಗೇರ ಎಂಬವರನ್ನು ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ವಶಕ್ಕೆ ತೆಗೆದುಕೊಂಡರು.
ಆರೋಪಿಗಳ ಪೈಕಿ ದಿವಾಕರ ಆಚಾರ್ಯರನ್ನು ವಿಚಾರಿಸಿದಾಗ ತನ್ನ ಕಬ್ಬಿಣದ ಕೊಟ್ಟಿಗೆಯಲ್ಲಿ ಅಕ್ರಮವಾಗಿ ನಾಡಕೋವಿಯನ್ನು ತಯಾರಿಸುತ್ತಿದ್ದೇನೆ ಹಾಗೂ ತಯಾರಿಸಿದ ಕೋವಿಗಳ ಪೈಕಿ ಒಂದನ್ನು ಹಾಸನದ ಚಂದನ್ಗೆ ಮಾರಾಟ ಮಾಡಿದ್ದು, ಇನ್ನೊಂದನ್ನು ಕೊಳ್ತಿಗೆ ಗ್ರಾಮದ ಪಾಲ್ತಾಡು ಲೋಹಿತ್ಗೆ ನೀಡಿದ್ದೇನೆಂದು ತಪ್ಪೊಪ್ಪಿಗೆ ನೀಡಿದ್ದು, ಆ ಪ್ರಕಾರ ತನಿಖೆ ನಡೆಸಿದಾಗ ಆರೋಪಿಗಳ ಸ್ವಾಧೀನದಲ್ಲಿದ್ದ ಅಕ್ರಮ ಕೋವಿಗಳನ್ನು ಜಪ್ತಿ ಮಾಡಿ ಆರೋಪಿಗಳ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದರೆನ್ನಲಾದ ಆರೋಪದಡಿ ಬಂಧಿಸಿ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಸುಳ್ಯ ನ್ಯಾಯಾಲಯವು ಎಲ್ಲಾ ಆರೋಪಿಗಳಿಗೂ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿತ್ತು.
ಇದೀಗ ಪುತ್ತೂರು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ರೊಡಾಲ್ಫ್ ಪಿರೇರಾರವರು ಆರೋಪಿಗಳಾದ ಅಶೋಕ, ಚಂದನ್, ಕಾರ್ತಿಕ್ ಹಾಗೂ ರೋಹಿತ್ ಬಂಗೇರರವರಿಗೆ ತಲಾ ರೂ. 50,000ಕ್ಕೆ ಬಾಂಡ್ ಹಾಗೂ ಅಷ್ಟೇ ಮೊತ್ತದ ಜಾಮೀನು ನೀಡುವ ಷರತ್ತಿನ ಮೇರೆಗೆ ಅವರ ಪರವಾಗಿ ಸಲ್ಲಿಸಲಾದ ಜಾಮೀನು ಅರ್ಜಿಯನ್ನು ಪುರಸ್ಕರಿಸಿ ಆದೇಶ ನೀಡಿದ್ದಾರೆ. ಆರೋಪಿಗಳ ಪರ ಸುಳ್ಯದ ನ್ಯಾಯವಾದಿಗಳಾದ ಎಂ. ವೆಂಕಪ್ಪ ಗೌಡ, ಚಂಪಾ ವಿ.ಗೌಡ ಹಾಗೂ ರಾಜೇಶ್ ಬಿ.ಜಿ.ಯವರು ವಾದಿಸಿದ್ದಾರೆ.