ಸುಳ್ಯ: ಯುವಕರು ಅಪಾಯ ಲೆಕ್ಕಿಸದೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲು ತುಂಬಿದ ನದಿ ದಾಟಿದ ಘಟನೆ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಮರಸಂಕ ಎಂಬಲ್ಲಿ ನಡೆದಿದೆ.
ಜಾಲ್ಸೂರು ಗ್ರಾಮದ ಮಹಿಳೆ ಮನೆಯಲ್ಲೇ ಬಿದ್ದು ಕಾಲು ಮುರಿದುಕೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಹೊಳೆಗೆ ಸೇತುವೆಯಿಲ್ಲದ ಕಾರಣ ಅಪಾಯವನ್ನೂ ಲೆಕ್ಕಿಸದೇ ಯುವಕರು ಮಹಿಳೆಯನ್ನು ಹೊತ್ತುಕೊಂಡು ಸುಮಾರು ಅರ್ಧ ಕಿಲೋ ಮೀಟರ್ ತುಂಬಿದ ನದಿ ದಾಟಿದ್ದಾರೆ.
ಮರಸಂಕ ಪ್ರದೇಶದಲ್ಲಿ ಯಾವುದೇ ಸೇತುವೆ ವ್ಯವಸ್ಥೆ ಇಲ್ಲ. ಹಲವು ವರ್ಷಗಳಿಂದ ಅರ್ಧ ಕಿಲೋ ಮೀಟರ್ ಹೊಳೆ ದಾಟಿ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಇದೆ. ಹಲವು ವರ್ಷಗಳಿಂದ ಸೇತುವೆ ನಿರ್ಮಿಸಲು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ. ನಿನ್ನೆಯಿಂದ ನಿರಂತರ ಸುರಿದ ಮಳೆಯಿಂದ ಮರಸಂಕದ ಬಳಿ ಇರುವ ನದಿ ಉಕ್ಕಿ ಹರಿಯುತ್ತಿದ್ದು, ಈ ಪ್ರವಾಹ ಪರಿಸ್ಥಿತಿಯಲ್ಲೇ ಯುವಕರು ಅಪಾಯ ಲೆಕ್ಕಿಸದೇ ಮಹಿಳೆಯನ್ನು ಆಸ್ಪತ್ರೆ ಸೇರಿಸಲು ಹೊಳೆ ದಾಟಿಸೋ ವಿಡಿಯೋ ಇದೀಗ ವೈರಲ್ ಆಗಿದೆ.