ಸುಳ್ಯ: ವ್ಯಕ್ತಿಯೋರ್ವರು ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಡೆದು ನಿಲ್ಲಿಸಿ ಆಟೋರಿಕ್ಷಾದಿಂದ ಹೊರಗೆಳೆದು ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವ ಘಟನೆ ಸುಳ್ಯ ಮುಖ್ಯ ರಸ್ತೆಯಲ್ಲಿ ಕಾಟಿಪಳ್ಳ ಎಂಬಲ್ಲಿ ನಡೆದಿದೆ.
ಆರೋಪಿಗಳನ್ನು ಅಜ್ಜಾವರ ಗ್ರಾಮ ಸುಳ್ಯ ನಿವಾಸಿಗಳಾದ ದಿನೇಶ್(45), ಪುರುಷೋತ್ತಮ (32) ಹಾಗೂ ಸನತ್ (25) ಎಂದು ಗುರುತಿಸಲಾಗಿದೆ.
ಅಮರ ಮುಡ್ನೂರು ಗ್ರಾಮ, ಸುಳ್ಯ ನಿವಾಸಿ ಅಜಿತ್ (21) ಎಂಬವರ ದೂರಿನಂತೆ ಇವರು ಜಯರಾಮ ಎಂಬುವರ ಬಾಬ್ತು ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಾ ಅಜ್ಜಾವರ-ಸುಳ್ಯ ಮುಖ್ಯ ರಸ್ತೆಯಲ್ಲಿ ಕಾಟಿಪಳ್ಳ ಎಂಬಲ್ಲಿ ತಲುಪಿದಾಗ, ಅಜ್ಜಾವರ ಗ್ರಾಮ ಸುಳ್ಯ ನಿವಾಸಿಗಳಾದ ದಿನೇಶ್, ಪುರುಷೋತ್ತಮ ಹಾಗೂ ಸನತ್ ಎಂಬವರುಗಳು, ಅಜಿತ್ ಪ್ರಯಾಣಿಸುತ್ತಿದ್ದ ಆಟೋರಿಕ್ಷಾವನ್ನು ತಡೆದು ನಿಲ್ಲಿಸಿ, ಅವರನ್ನು ಆಟೋರಿಕ್ಷಾದಿಂದ ಹೊರಗೆಳೆದು ಹಲ್ಲೆ ನಡೆಸಿರುತ್ತಾರೆ. ಈ ವೇಳೆ ಆಟೋ ಚಾಲಕ ಜಯರಾಮ್ ಹೊಡೆಯುತ್ತಿರುವುದನ್ನು ತಡೆಯಲು ಪ್ರಯತ್ನಿಸಿದಾಗ, ಅವರನ್ನೂ ಬೆದರಿಸಿರುತ್ತಾರೆ. ಬಳಿಕ ಆರೋಪಿಗಳು ಜೀವಬೆದರಿಕೆ ಒಡ್ಡಿ ತೆರಳಿರುತ್ತಾರೆ. ಇದರಿಂದ ಹಲ್ಲೆಯಿಂದ ಗಾಯಗೊಂಡಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂ: 23/2024 ಕಲಂ: 341.323.324. 506 R/W 34 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.