ಹೊಸದಿಲ್ಲಿ : ಕೋವಿಡ್ -19ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರವನ್ನು ಪಾವತಿಸಲು ಹಾಗೂ ಮರಣ ಪ್ರಮಾಣಪತ್ರಗಳನ್ನು ನೀಡಲು ಮಾರ್ಗಸೂಚಿಯನ್ನು ರೂಪಿಸಲು ಜೂನ್ 30 ರ ಆದೇಶದ ಪಾಲನಾ ವರದಿಯನ್ನು ಸಲ್ಲಿಸಲು ಸುಪ್ರೀಂಕೋರ್ಟ್ ಶುಕ್ರವಾರ ಕೇಂದ್ರ ಸರಕಾರಕ್ಕೆ ಸೆಪ್ಟೆಂಬರ್ 11ರವರೆಗೆ ಕಾಲಾವಕಾಶ ನೀಡಿದೆ.
ಸರಕಾರವು ಕೋರಿದ್ದ 10 ದಿನಗಳನ್ನು ನೀಡಲು ನ್ಯಾಯಾಲಯವು ನಿರಾಕರಿಸಿದೆ. ಕೊನೆಯ ಆದೇಶದ ಬಳಿಕ ಮಹತ್ವದ ಅವಧಿ ಕಳೆದಿದೆ ಎಂದು ಬೆಟ್ಟು ಮಾಡಿದ ನ್ಯಾಯಾಲಯ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಕೊರೋನದ ಮೂರನೇ ಅಲೆಯೂ ಮುಗಿಯುತ್ತದೆ ಹಾಗೂ ಸರಕಾರವು ಇನ್ನೂ ದೊಡ್ಡ ಸವಾಲನ್ನು ಎದುರಿಸಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
“ಮರಣ ಪ್ರಮಾಣಪತ್ರಗಳು, ಇತ್ಯಾದಿಗಳ ಆದೇಶವನ್ನು ಬಹಳ ಹಿಂದೆಯೇ ರವಾನಿಸಲಾಗಿದೆ. ನೀವು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವಹೊತ್ತಿಗೆ, ಮೂರನೇ ಅಲೆಯೂ ಮುಗಿಯುತ್ತದೆ” ಎಂದು ನ್ಯಾಯಾಲಯ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಕೋವಿಡ್ನಿಂದ ಮೃತಪಟ್ಟವರ ಕುಟುಂಬಗಳು ಹಣಕಾಸಿನ ಪರಿಹಾರವನ್ನು ಪಡೆಯಬೇಕು ಎಂದು ಜೂನ್ ನಲ್ಲಿ ನ್ಯಾಯಾಲಯವು ತೀರ್ಪು ನೀಡಿತು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಮೊತ್ತವನ್ನು ನಿರ್ಧರಿಸಲು ಹಾಗೂ ಅಗತ್ಯ ಮಾರ್ಗಸೂಚಿಗಳನ್ನು ರೂಪಿಸಲು ಆರುವಾರಗಳ ಅವಕಾಶ ನೀಡಿತ್ತು ಎಂದು ತಿಳಿದು ಬಂದಿದೆ.