ತತ್ವ ಸ್ಕೂಲ್ ಆಫ್ ಆರ್ಟ್ ಪುತ್ತೂರು ಇದರ ಆಶ್ರಯದಲ್ಲಿ ಆಕಾರ್ ಚಿತ್ರಕಲಾ ಪ್ರದರ್ಶನ ೨೦೨೧ ಕಾರ್ಯಕ್ರಮಕ್ಕೆ ನಿನ್ನೆ ಚಾಲನೆ ದೊರಕಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹಾಲಸಾ ಚಿತ್ರಕಲಾ ಕಾಲೇಜು ಮಂಗಳೂರು ಇದರ ಪ್ರಾಂಶುಪಾಲ ಕೆ ಟಿ ನಾಗರಾಜ್, ಅಧ್ಯಕ್ಷತೆ ವಹಿಸಿಕೊಂಡ ಬರೆಕರೆ ವೆಂಕಟರಮಣ ಕೆದಿಲಾಯ ಟ್ರಸ್ಟ್ (ರಿ)ನ ಕಾರ್ಯನಿರ್ವಾಹಕ ಕಾರ್ಯದರ್ಶಿ ಗಣೇಶ ಕೆದಿಲಾಯ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಕೆ ಟಿ ನಾಗರಾಜ್, ಇಂದು ಶಿಕ್ಷಣ ವ್ಯವಸ್ಥೆ ಬದಲಾಗಿದೆ. ಕಲೆಗೆ ಪ್ರಾಶಸ್ತ್ಯ ಹೆಚ್ಚಾಗಿದೆ. ಶಿಕ್ಷಣ ಕಲಿಸುವಾಗ ಚಿತ್ರಕಲೆ ಮಹತ್ವದ ಮಾತ್ರ ವಹಿಸುತ್ತದೆ. 64 ಕಲೆಗಳನ್ನು ಗೊತ್ತಿರಬೇಕು. ಇವುಗಳಲ್ಲಿ ಪ್ರಮುಖವಾದವು ಲಲಿತ ಕಲೆ. ಮನುಷ್ಯನನ್ನು ಸಂತೋಷಗೊಳಿಸಿ ದುಃಖ ದುಮ್ಮಾನವನ್ನು ದೂರವಾಗುತ್ತದೆ. ಚಿತ್ರ ಸೊಗಸಾಗಿದ್ದಾಗ ಅದು ಸುಖ ನೆಮ್ಮದಿಯನ್ನು ಕೊಡುತ್ತದೆ. ತತ್ವ ಸ್ಕೂಲ್ ಆರ್ಟ್ ಸ್ಥಾಪನೆ ಮಾಡಿ ಉತ್ತಮ ಕೆಲಸ ಮಾಡಿದ್ದಾರೆ. ಚಿತ್ರಕಲೆಯಿಂದ ಮನುಷ್ಯನ ಮೆದುಳು ವೃದ್ಧಿಯಾಗುತ್ತದೆ. ಇದು ಸಾಧನೆಗೆ ಪ್ರೇರಣೆಯಾಗುತ್ತದೆ. ಇಲ್ಲಿ ಪ್ರದರ್ಶನಕ್ಕೆ ಇಟ್ಟ ಚಿತ್ರ ನೋಡಿದಾಗಲೇ ನನಗೆ ಅನಿಸಿದೆ ಈ ಚಿತ್ರಕಲಾ ಪ್ರದರ್ಶನ ಯಶಸ್ವಿಯಾಗುತ್ತೆ. ವಯೋಗುಣಕ್ಕೆ ಅನುಗುಣವಾಗಿ ಕಲಾ ಪ್ರಕಾರಗಳ ತರಬೇತಿ ನೀಡಲಾಗಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿಕೊಂಡ ಬರೆಕರೆ ವೆಂಕಟರಮಣ ಕೆದಿಲಾಯ ಟ್ರಸ್ಟ್ (ರಿ)ನ ಕಾರ್ಯನಿರ್ವಾಹಕ ಕಾರ್ಯದರ್ಶಿ ಗಣೇಶ ಕೆದಿಲಾಯ ಮಾತನಾಡಿ ಮಕ್ಕಳು ಸತತ ಅಭ್ಯಾಸ ದಿಂದ ಸಾಧಿಸಲು ಸಾಧ್ಯ. ಮಾಡಿದ ಕೆಲಸದಲ್ಲಿ ಪರಿಪೂರ್ಣತೆ ಇರಬೇಕು. ಸಾಧನೆ ಮಾಡಿ ಇನ್ನೂ ಮುಂದು ಹೋಗಬೇಕು. ತತ್ವ ಸ್ಕೂಲ್ ಆಫ್ ಆರ್ಟ್ ಇನ್ನೂ ಸಾಧಿಸಲಿ ಎಂದು ಶುಭ ಹಾರೈಸಿದರು.
ಚಿತ್ರಕಲಾ ಪ್ರದರ್ಶನದ ವಿಶೇಷತೆ: ಡಿ. 25 ರಿಂದ 27 ರ ವರೆಗೆ ಚಿತ್ರಕಲಾ ಪ್ರದರ್ಶನ ನಡೆಯಲಿದೆ. ಪುತ್ತೂರಿನ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ವೆಂಕಟರಮಣ ಬರೆಕರೆ ಸಭಾಂಗಣದ ಎರಡನೇ ಮಹಡಿಯಲ್ಲಿನ ತತ್ವ ಸ್ಕೂಲ್ ಆಫ್ ಆರ್ಟ್’ನಲ್ಲಿ ಚಿತ್ರಕಲಾ ಪ್ರದರ್ಶನ ನಡೆಯುತ್ತಿದೆ. ೫೦ ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ೧೧೫ ಕ್ಕೂ ಅಧಿಕ ಚಿತ್ರಕಲೆಯನ್ನು ವೀಕ್ಷಿಸಬಹುದಾಗಿದೆ. ಬೆಳಗ್ಗೆ ಸಮಯ ೧೦ ರಿಂದ ಸಂಜೆ ೬ರ ವರೆಗೆ ಪ್ರದರ್ಶನಕ್ಕಾಗಿ ತೆರೆದಿರುತ್ತದೆ.
ತತ್ವ ಸ್ಕೂಲ್ ಆಫ್ ಆರ್ಟ್ನ ಪ್ರಾಂಶುಪಾಲೆ ರಶ್ಮಿ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ದಿವ್ಯಶ್ರೀ ಸ್ವಾಗತಿಸಿ, ತತ್ವ ಸ್ಕೂಲ್ ಆಫ್ ಆರ್ಟ್’ನ ನಿರ್ದೇಶಕ ಟೀಲಾಕ್ಷ ಧನ್ಯವಾದಗೈದರು. ಸಂಸ್ಥೆಯ ಅತಿಥಿ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.