ಹೌದು..ಕಷ್ಟದಲ್ಲಿರುವ ಬಡ ಹೃದಯಗಳ ಕಣ್ಣೀರಿನಲ್ಲಿ ನಾವೂ ಪಾಲುದಾರರಾಗುವ ಮೂಲಕ ತಮ್ಮಿಂದಾದಷ್ಟು ಸಹಾಯ ನೀಡಬೇಕಾದರೆ ಕೋಟ್ಯಾಧೀಶನಾಗಬೇಕಿಲ್ಲ. ಹಣ, ಅಂತಸ್ತು ಬೇಕಾಗಿಲ್ಲ. ಒಳ್ಳೆಯ ಹೃದಯ ಪಡೆದಿದ್ದರೆ ಇನ್ನೊಬ್ಬರ ಕಣ್ಣೀರು ಒರೆಸಲು ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ ವಿಟ್ಲದ “ಟೀಂ ಸಂರಕ್ಷಣ್” ತಂಡ.
ಕಳೆದ ವರ್ಷ ದಸರಾ ಸಂದರ್ಭ ವಿಭಿನ್ನ ರೀತಿಯ ವೇಷ ಧರಿಸಿದ್ದ ಸಂದೀಪ್ ಕುಕ್ಕೆಬೆಟ್ಟು ಈ ಮೂಲಕ ಬಂದ ಹಣವನ್ನು ಒಕ್ಕೆತ್ತೂರಿನ ಬಡ ಕುಟುಂಬದ ಅನಾರೋಗ್ಯ ಪೀಡಿತ ಪುಟಾಣಿಗೆ ನೀಡುವ ಮೂಲಕ ಟೀಂ ಸಂರಕ್ಷಣ್ ತಂಡ ಹೃದಯವಂತಿಕೆ ಮೆರೆದಿದೆ.
ಈ ಬಾರಿ ದಸರಾ ಹಬ್ಬದ ಸಂದರ್ಭ “ಟೀಂ ಸಂರಕ್ಷಣ್” ತಂಡದ ಎರಡನೇ ವರ್ಷದ ಕಲಾಸೇವೆಯಾಗಿ ಸಂದೀಪ್ ಕುಕ್ಕೆಬೆಟ್ಟು ತನ್ನ ತಂಡದ ಸಹಕಾರದಲ್ಲಿ ವಿಶಿಷ್ಟ ಶೈಲಿಯ ವೇಷಧರಿಸಿ ಜನರ ಮನರಂಜನೆಗೆ ಕಾರಣವಾಗಿದ್ದರು. ಈ ಬಾರಿ ಕೂಡಾ ಸಂಗ್ರಹವಾದ ಹಣದಲ್ಲಿ ಒಂದು ನಯಾಪೈಸೆ ಕೂಡಾ ಸ್ವಂತಕ್ಕೆ ಬಳಸದ “ಟೀಂ ಸಂರಕ್ಷಣ್” ತಂಡ ಸಾರ್ವಜನಿಕರಿಂದ ಬಂದ 52,000/-(ಐವತ್ತೆರಡು ಸಾವಿರ)ಹಣವನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎರಡು ತಿಂಗಳ ಪುಟಾಣಿಯ ಚಿಕಿತ್ಸಾ ವೆಚ್ಚಕ್ಕಾಗಿ ನೀಡುವ ಮೂಲಕ ಹೃದಯವಂತಿಕೆ ಮೆರೆದಿದೆ.
ದೇರೆಬೈಲು ಬಜ್ಪೆಯ ಬಡಕುಟುಂಬದ ಅರುವತ್ತು ದಿನದ ಪುಟಾಣಿಗೆ ಹುಟ್ಟುವಾಗಲೇ ಬೇರೆಬೇರೆಯಾಗಿ ಇರಬೇಕಿದ್ದ ಅನ್ನನಾಳ ಮತ್ತು ಶ್ವಾಸನಾಳ ಒಂದಾಗಿತ್ತು. ಪುಟಾಣಿ ಬದುಕುಳಿಯಲು ಲಕ್ಷಗಟ್ಟಲೆ ಖರ್ಚಿನ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಮಂಗಳೂರಿನ ಆಸ್ಪತ್ರೆಯಲ್ಲಿ ಇದೀಗ ದಾಖಲಾಗಿರುವ ಬಡಕುಟುಂಬದ 60 ದಿನದ ಪುಟಾಣಿಯ ಚಿಕಿತ್ಸೆಗಾಗಿ “ಟೀಂ ಸಂರಕ್ಷಣ್” ತಂಡ ದಸರಾ ಸಂದರ್ಭ ಸಂಗ್ರಹಿಸಿದ್ದ ಆ ಸಂಪೂರ್ಣ ಮೊತ್ತವನ್ನು ನೀಡುವ ಮೂಲಕ ಹೃದಯವಂತಿಕೆ ಮೆರೆದಿದೆ. ಟೀಂ ಸಂರಕ್ಷಣ್ ತಂಡದ ಮಾನವೀಯ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ರವಿ ಸಿಂಗೇರಿ, ಉಮೇಶ್ ನಿಡ್ಯಾ, ರೇವತಿ, ತೀರ್ಥೇಶ್, ಯತಿಶ್ರೀ, ಪ್ರಶಾಂತ್, ದಿವ್ಯಾ, ಗುರುಪ್ರಸಾದ್, ನಿಶ್ಮಿತಾ ಮತ್ತು ರೇಶ್ಮಾ ಮತ್ತಿತರರು ಟೀಂ ಸಂರಕ್ಷಣ್ ತಂಡದ ಕಲಾಸೇವೆಯಲ್ಲಿ ಕೈಜೋಡಿಸಿದ್ದಾರೆ.