ಶ್ರೀನಗರ : ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಉಗ್ರರ ಬೇಟೆ ಮುಂದುವರಿದಿದೆ. ಶ್ರೀನಗರದ ಹೊರವಲಯದಲ್ಲಿರುವ ರಂಗ್ರೆತ್ ಎಂಬಲ್ಲಿ ನಡೆದ ಎನ್ಕೌಂಟರ್ನಲ್ಲಿ ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸೇಫುಲ್ಲಾ ಮೀರ್ ಅಲಿಯಾಸ್ ಡಾ. ಸೇಫುಲ್ಲಾ ಎಂಬಾತನನ್ನು ಹತ್ಯೆಗೈಯಲಾಗಿದೆ. ಈ ಘಟನೆಯಲ್ಲಿ ಭದ್ರತಾ ಪಡೆಗಳು ಮತ್ತೊಬ್ಬ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿದಿದ್ದಾರೆ. ಸಫೀವುಲ್ಲಾನನ್ನ ಎ ಕೆಟಗರಿ ಉಗ್ರನೆಂದು ಪರಿಗಣಿಸಲಾಗಿತ್ತು. ಮೇ ತಿಂಗಳಲ್ಲಿ ರಿಯಾಜ್ ನಾಯ್ಕೂ ಹತ್ಯೆಯಾದ ಬಳಿಕ ಹಿಜ್ಬುಲ್ ಮುಜಾಹಿದೀನ್ ಸಂಘಟನೆಗೆ ಸಫೀವುಲ್ಲಾ ನೇತೃತ್ವ ವಹಿಸಿಕೊಂಡಿದ್ದನೆನ್ನಲಾಗಿದೆ. ದಕ್ಷಿಣ ಕಾಶ್ಮೀರದ ಜಿಲ್ಲೆಗಳಾದ ಪುಲ್ವಾ, ಕುಲಗಾಮ್ ಮತ್ತು ಶೋಪಿಯಾನ್ನಲ್ಲಿ ಹೆಚ್ಚಾಗಿ ಸಕ್ರಿಯವಾಗಿರುತ್ತಿದ್ದ ಸೇಫುಲ್ಲಾ ಇಂದು ಭಾನುವಾರ ಶ್ರೀನಗರದಲ್ಲಿ ಏನು ಮಾಡುತ್ತಿದ್ದ ಎಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ. ಮೂಲಗಳ ಪ್ರಕಾರ, ಮುಂಬರುವ ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ (ಬಿ.ಡಿ.ಸಿ.) ಚುನಾವಣೆಗಳ ಸಂಬಂಧ ಉಗ್ರಗಾಮಿಗಳನ್ನ ಕಲೆಹಾಕಿ ಸಫೀವುಲ್ಲಾ ಸಭೆ ನಡೆಸುವುದರಲ್ಲಿದ್ದ ಎನ್ನಲಾಗುತ್ತಿದೆ.
ಸೇಫುಲ್ಲಾ ಎ ಕೆಟಗರಿಯ ಉಗ್ರನಾಗಿದ್ದು, ಈತನ ಹತ್ಯೆಯಾಗಿರುವುದು ಸಣ್ಣ ವಿಚಾರವಲ್ಲ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ಹಲವು ದಾಳಿಗಳಲ್ಲಿ ಡಾ. ಸಫೀವುಲ್ಲಾ ಹಸ್ತ ಇತ್ತು. ಈತ ಕಣಿವೆ ರಾಜ್ಯದ ಮೋಸ್ಟ್ ವಾಂಟೆಡ್ ಉಗ್ರರಲ್ಲೊಬ್ಬನಾಗಿದ್ದ. ಈತ ಶ್ರೀನಗರದ ಹೊರವಲಯಕ್ಕೆ ಬಂದಿದ್ಧಾನೆಂಬ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಸ್ಥಳದಲ್ಲಿ ಶೋ ನಡೆಸಿದ್ದಾರೆ. ಆಗ ಉಗ್ರರು ಗುಂಡಿನ ದಾಳಿ ನಡೆಸಿದ್ಧಾರೆ. ಈ ಗುಂಡಿನ ಕಾಳಗದಲ್ಲಿ ಸೇಫುಲ್ಲಾ ಹತ್ಯೆಯಾಗಿದ್ದಾನೆ. ಮತ್ತೊಬ್ಬ ಶಂಕಿತ ಉಗ್ರನನ್ನು ಸೆರೆ ಹಿಡಿಯಲಾಗಿದೆ. ಎನ್ಕೌಂಟರ್ ಸ್ಥಳದಲ್ಲಿ ಮದ್ದು ಗುಂಡುಗಳನ್ನ ವಶಪಡಿಸಿಕೊಳ್ಳಲಾಗಿದೆ.
ಜಮ್ಮು-ಕಾಶ್ಮೀರದಲ್ಲಿ ಪೊಲೀಸರ ನೆಟ್ವರ್ಕ್ ದಿನೇ ದಿನೇ ಗಟ್ಟಿಗೊಳ್ಳುತ್ತಲೇ ಇದೆ. ಶ್ರೀನಗರಕ್ಕೆ ಯಾವುದೇ ಉಗ್ರಗಾಮಿ ಪ್ರವೇಶ ಮಾಡಿದರೂ ಪೊಲೀಸರಿಗೆ ಮಾಹಿತಿ ರವಾನೆಯಾಗುತ್ತದೆ ಎಂದು ಪೊಲೀಸ್ ಮಹಾ ನಿರ್ದೇಶಕ ವಿಜಯ್ ಕುಮಾರ್ ತಿಳಿಸಿದ್ದಾರೆ.
12ನೇ ತರಗತಿ ಓದಿದ್ದ 26 ವರ್ಷದ ಸಫೀವುಲ್ಲಾ ಮೀರ್ನನ್ನು ಡಾಕ್ಟರ್ ಸೇಫ್ ಎಂದೂ ಕರೆಯಲಾಗುತ್ತಿತ್ತು. ಇದಕ್ಕೆ ಕಾರಣವೂ ಇದೆ. ಭದ್ರತಾ ಪಡೆಗಳ ಎನ್ಕೌಂಟರ್ನಲ್ಲಿ ಗಾಯಗೊಂಡ ಉಗ್ರಗಾಮಿಗಳಿಗೆ ಶುಶ್ರೂಷೆ ನೀಡುತ್ತಿದ್ದ ಈತನನ್ನು ಉಗ್ರರ ವಲಯದಲ್ಲಿ ಡಾಕ್ಟರ್ ಎಂದೇ ಸಂಬೋಧಿಸಲಾಗುತ್ತಿತ್ತೆನ್ನಲಾಗಿದೆ.
ಪುಲ್ವಾಮ ಮೂಲದ ಈತ ಬಯೋಸೈನ್ಸ್ನಲ್ಲಿ ಐಟಿಐ ಕೋರ್ಸ್ ಕೂಡ ಮಾಡಿದ್ದ. ಶ್ರೀನಗರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಇನ್ಫಾರ್ಮೇಶನ್ ಟೆಕ್ನಾಲಜಿ ಸಂಸ್ಥೆಯಲ್ಲಿ ಟೆಕ್ನೀಶಿಯನ್ ಆಗಿ ಮೂರು ವರ್ಷ ಕೆಲಸ ಮಾಡಿದ್ದ. ಇದೇ ಮೇ ತಿಂಗಳಲ್ಲಿ ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ರಿಯಾಜ್ ನಾಯ್ಕೂ ಹತ್ಯೆಯಾದ ಬಳಿಕ ಆತನದ್ದೇ ಸ್ಫೂರ್ತಿಯಲ್ಲಿ ಸೇಫುಲ್ಲಾ ಸಂಘಟನೆಯ ನೇತೃತ್ವ ವಹಿಸಿದ್ದ. ಬುರ್ಹನ್ ವಾನಿ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದ ಉಗ್ರಗಾಮಿಗಳ ಗುಂಪಿನಲ್ಲಿ ಜೀವಂತ ಉಳಿದದ್ದು ಸಫೀವುಲ್ಲಾ ಮಾತ್ರವೇ. ಈಗ ಈತನೂ ಹತ್ಯೆಯಾಗುವುದರೊಂದಿಗೆ ಆ ನೊಟೋರಿಯಸ್ ಗ್ಯಾಂಗ್ ಸಂಪೂರ್ಣ ಎಲಿಮಿನೇಟ್ ಆದಂತಾಗಿದೆ.