ಕಾಸರಗೋಡು: ಗಲ್ಫ್ ಉದ್ಯೋಗಿಯ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು 25 ಪವನ್ ಚಿನ್ನಾಭರಣ ಹಾಗೂ ನಗದನ್ನು ಕಳವುಗೈದ ಘಟನೆ ಕುಂಬಳೆ ಶಾಂತಿಪಳ್ಳದಲ್ಲಿ ನಡೆದಿದೆ.
ಶಾಂತಿಪಳ್ಳ ಬದ್ರಿಯಾ ನಗರದ ಝುಬೈರ್ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ರಂಜಾನ್ ಪ್ರಯುಕ್ತ ಝುಬೈರ್ ಕೆಲವು ದಿನಗಳ ಹಿಂದೆಯಷ್ಟೇ ಊರಿಗೆ ಬಂದಿದ್ದಾರೆ. ಉಳ್ಳಾರ್ನಲ್ಲಿರುವ ಸಹೋದರಿಯ ಮನೆಯಲ್ಲಿ ಇಫ್ತಾರ್ ಕೂಟದಲ್ಲಿ ಭಾಗವಹಿಸಲೆಂದು ಝುತನ್ನ ಪತ್ನಿ, ಮಕ್ಕಳು ಮತ್ತು ತಾಯಿ ಜತೆ ನಿನ್ನೆ ಸಂಜೆ ಹೋಗಿದ್ದರು.
ಇಂದು ಬೆಳಿಗ್ಗೆ ಮನೆಗೆ ವಾಪಸ್ಸು ಆದಾಗಷ್ಟೇ ಕಳವು ನಡೆದ ವಿಷಯ ಅವರ ಗಮನಕ್ಕೆ ಬಂದಿದೆ. ಮನೆಯ ಎದುರುಗಡೆ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಕಪಾಟುಗಳನ್ನೆಲ್ಲಾ ಮುರಿದು ಅದರೊಳಗಿದ್ದ ನಗ-ನಗದು ದೋಚಿದ್ದಾರೆ.
ಮನೆಯ ಚಲನವಲನ ಅರಿತವರು ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ . ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಈ ಮನೆಗೆ ಬಂದು ಅಗತ್ಯದ ಮಾಹಿತಿ ಸಂಗ್ರಹಿಸತೊಡಗಿದ್ದಾರೆ.