ಉಳ್ಳಾಲ: ಮೆಹಂದಿ ದಿನ ಹಣ್ಣು ಖರೀದಿಗೆಂದು ತೆರಳಿದ್ದ ವರ ನಾಪತ್ತೆಯಾದ ಘಟನೆ ಉಳ್ಳಾಲ ಕೊಣಾಜೆ ಠಾಣಾ ವ್ಯಾ ಪ್ತಿಯ ತೌಡುಗೋಳಿ ವರ್ಕಾಡಿ ಎಂಬಲ್ಲಿ ನಡೆದಿದ್ದು, ವರ ನಾಪತ್ತೆಯಾದ ಕಾರಣ ಇಂದು ನಡೆಯಬೇಕಿದ್ದ ಮದುವೆಯನ್ನು ರದ್ದುಗೊಳಿಸಲಾಗಿದೆ.
ಮನೆಯಲ್ಲಿ ಸಂಜೆ ನಡೆಯಬೇಕಾಗಿದ್ದ ಮೆಹಂದಿ ಶಾಸ್ತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಪೋಷಕರು, ಕುಟುಂಬಸ್ಥರು ಸಂಭ್ರಮದಲ್ಲಿ ತೊಡಗಿದ್ದರೆ ಇತ್ತ ಹಣ್ಣು ಖರೀದಿಗೆಂದು ತೆರಳಿದ್ದ ವರನೇ ನಾಪತ್ತೆಯಾಗಿದ್ದು ವಧೂ ವರರ ಕುಟುಂಬವನ್ನು ಆತಂಕಕ್ಕೀಡು ಮಾಡಿದೆ. ತೌಡುಗೋಳಿ- ವರ್ಕಾಡಿ ದೇವಂದಪಡ್ಪುವಿನ ಉದ್ಯಮಿ ಐತಪ್ಪ ಶೆಟ್ಟಿ ಅವರ ಸುಪುತ್ರ ಕಿಶನ್ ಶೆಟ್ಟಿ ನಾಪತ್ತೆಯಾದ ವರ.
ಇಂದು ಜೂ.1 ಗುರುವಾರದಂದು ಕಿಶನ್ ಶೆಟ್ಟಿಗೆ ಉಪ್ಪಳ ಮೂಲದ ಪ್ರಸ್ತುತ ಜಪ್ಪಿನ ಮೊಗರಿನಲ್ಲಿರುವ ಕುಟುಂಬವೊಂದರ ಉಪನ್ಯಾಸಕಿಯೊಂದಿಗೆ ವಿವಾಹ ನಿಗದಿಯಾಗಿತ್ತು .
ವಧುವಿನ ಮನೆಯಲ್ಲಿ ಅದಾಗಲೇ ಅದ್ಧೂರಿ ಮೆಹಂದಿ ಶಾಸ್ತ್ರ ಮುಗಿದಿದ್ದು ವರನ ಮನೆಯಲ್ಲಿ ನಡೆಯಬೇಕಿದ್ದ ಮೆಹಂದಿ ಶಾಸ್ತ್ರಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ನಿನ್ನೆ ಮಧ್ಯಾಹ್ನ ಹಣ್ಣು ತರಲೆಂದು ವರ ಸ್ಕೂಟರ್ ಏರಿ ಮನೆಯಿಂದ ಹೊರಟಿದ್ದ. ಆ ಬಳಿಕ ದೇರಳಕಟ್ಟೆ ತಲುಪುತ್ತಿದ್ದಂತೆಯೇ ಪೊಲೀಸ್ ಮೂಲಗಳ ಪ್ರಕಾರ ಸುಮಾರು ಅರ್ಧ ತಾಸು ಯಾರಲ್ಲಿಯೋ ಫೋನಲ್ಲಿ ಮಾತನಾಡಿದ್ದನಂತೆ. ಆ ಬಳಿಕ ನಾಪತ್ತೆಯಾದ ವರ ಇನ್ನೂ ಮನೆಗೆ ಬಂದಿಲ್ಲ . ಎರಡೂ ಕುಟುಂಬ ಆರ್ಥಿಕವಾಗಿ ಸ್ಥಿತಿವಂತರಾಗಿದ್ದು ವಧು ವರರ ಮನೆಯಲ್ಲಿ ಸಂಭ್ರಮ ತುಂಬಿ ತುಳುಕಬೇಕಾಗಿತ್ತಾದರೂ ವರನ ನಾಪತ್ತೆ ಪ್ರಕರಣ ದಿಗ್ಭ್ರಮೆ ಮೂಡಿಸಿದೆ.
ಹಳೆ ಪ್ರೇಮ ಪ್ರಕರಣ ಅಡ್ಡಿಯಾಯಿತೇ..?
ಕಿಶನ್ ಗೆ ಕೆಲವು ವರ್ಷಗಳಿಂದ ಗಡಿಭಾಗದ ಅಂತರ್ಜಾತಿಯ ಯುವತಿಯೊಂದಿಗೆ ಪ್ರೇಮಾಂಕುರವಾಗಿತ್ತು ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದ್ದು ನಾಪತ್ತೆ ಬಳಿಕ ಆಕೆಯ ಬಳಿ ವಿಚಾರಿಸಿದಾಗ ತನಗೂ ಹಲವು ದಿನಗಳಿಂದ ಆತ ಕರೆ ಮಾಡಿಲ್ಲ ಎಂದು ತಿಳಿಸಿದ್ದಾಳಂತೆ. ತನ್ನ ಹೊರತು ಬೇರೆ ಯಾರನ್ನು ಮದುವೆಯಾದರೂ ಸಾಯುವುದಾಗಿ ಆಕೆ ಹೇಳಿದ್ದಳೆಂದು ಹೇಳಲಾಗುತ್ತಿದೆ.
ಕೊಣಾಜೆ ಠಾಣೆಯಲ್ಲಿ ಕಿಶನ್ ತಂದೆ ಐತಪ್ಪ ಶೆಟ್ಟಿ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಕಿಶನ್ ನ ಹಳೆಯ ಪ್ರೇಯಸಿಯನ್ನ ಕೊಣಾಜೆ ಠಾಣಾ ಪೊಲೀಸರು ಕರೆಸಿ ವಿಚಾರಣೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಪೊಲೀಸರು ಕಿಶನ್ ಶೆಟ್ಟಿ ಪತ್ತೆಕಾರ್ಯದಲ್ಲಿ ತೊಡಗಿದ್ದು ಕಿಶನ್ ಶೆಟ್ಟಿ ನಾಪತ್ತೆ ಪ್ರಕರಣ ಆತ್ಮಹತ್ಯೆಯೋ, ಅಪಹರಣವೋ ಎಂದು ತಲೆ ಕೆರೆದುಕೊಂಡಿದ್ದಾರೆ.