ಉಡುಪಿ: ಎಣ್ಣೆ ಹಾಗೂ ಗಾಂಜಾ ಮತ್ತಿನಲ್ಲಿ ಪಕ್ಕದ ಮನೆಯ ಎದುರುಗಡೆ ನಿಂತಿದ್ದ ಆಟೋ ರಿಕ್ಷಾಕ್ಕೆ ದುಷ್ಕರ್ಮಿಯೋರ್ವ ಬೆಂಕಿ ಹಚ್ಚಿದ ಘಟನೆ ಉಡುಪಿಯ ನಿಟ್ಟೂರು ಹನುಮಂತ ನಗರದಲ್ಲಿ ನಡೆದಿದೆ. ಖಲೀಮ್ (35) ಎಂಬಾತನೇ ನೆರಮನೆಯ ರಿಕ್ಷಾಕ್ಕೆ ಬೆಂಕಿ ಹಚ್ಚಿದ್ದು,. ಪೊಲೀಸರು ಅರೋಪಿಯನ್ನು ಬಂಧಿಸಿದ್ದಾರೆ.
ಹನುಮಂತ ನಗರದ ದಿವಾಕರ ಬೆಲ್ಚಡ ಎನ್ನುವವರಿಗೆ ಸೇರಿದ ಆಟೋ ರಿಕ್ಷಾ ಬೆಂಕಿಯ ಕೆನ್ನಾಲೆಗೆ ಸುಟ್ಟು ಕರಕಲಾಗಿದೆ.
ಖಲೀಮ್ ಎಂಬಾತ ಮಲ್ಪೆಯ ಮೀನುಗಾರಿಕೆ ದಕ್ಕೆಯಲ್ಲಿ ಕೆಲಸ ಮಾಡಿಕೊಂಡಿದ್ದು ಸೋಮವಾರ ತಡರಾತ್ರಿ ಎಣ್ಣೆ ಹಾಗೂ ಗಾಂಜಾ ಮತ್ತಲ್ಲಿ ಪಕ್ಕದ ಮನೆಯ ಮೇಲೆ ಕಲ್ಲು ಎಸೆದು ದಾಂಧಲೆ ನಡೆಸಿದ್ದಾನೆ. ಈ ಸಂಧರ್ಭದಲ್ಲಿ ದಿವಾಕರ ಅವರು ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಆತನಿಗೆ ವಾರ್ನಿಂಗ್ ನೀಡಿ ತೆರಳಿದ್ದರು.
ಪೊಲೀಸರು ತೆರಳಿದ ಬಳಿಕ ದಿವಾಕರ್ ಪೊಲೀಸರಿಂದ ಅವಮಾನವಾಗಿದೆ ಎಂದು ಅಕ್ರೋಶಗೊಂಡು ಮನೆ ಎದುರು ನಿಂತಿದ್ದ ರಿಕ್ಷಾಕ್ಕೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಸಂಧರ್ಭದಲ್ಲಿ ಮಲಗಿದ್ದ ದಿವಾಕರ ಕುಟುಂಬದವರು ಮನೆಯಿಂದ ಹೊರ ಬಂದು ನೀರು ಚೆಲ್ಲಿ ಬೆಂಕಿ ನಂದಿಸುವುದರೊಳಗೆ ರಿಕ್ಷಾ ಸಂಪೂರ್ಣ ಸುಟ್ಟು ಕರಕಲಾಗಿತ್ತು.
ತಕ್ಷಣ ಉಡುಪಿ ನಗರ ಠಾಣೆ ಪೊಲೀಸರು ಖಲೀಮ್ ನನ್ನು ವಶಕ್ಕೆ ಪಡೆದುಕೊಂಡಿದ್ದು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.