ಮಂಗಳೂರು: ಟ್ರಕ್ಕಿಂಗ್ ಹೋಗಿದ್ದ ಟೆಕ್ಕಿಯನ್ನು ಸ್ಥಳೀಯ ತಂಡವೊಂದು ರಕ್ಷಣೆ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಬಂಡಾಜೆ ಫಾಲ್ಸ್ ಬಳಿ ನಡೆದಿದೆ.
ಬೆಂಗಳೂರು ಖಾಸಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಾರಾಷ್ಟ್ರದ ಪಾರೇಶ್ ಕಿಶನ್ ಲಾಲ್ ಅಗರ್ವಾಲ್(25)ರನ್ನು ರಕ್ಷಣೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ಗ್ರಾಮದ ಸಂಕಶಾಲೆ ರಾಣಿಝರಿ ಫಾಲ್ಸ್ ಮೂಲಕ ಬಲ್ಲಾಳರಾಯನ ದುರ್ಗಾ ಕೋಟೆ ಮೂಲಕ ಬೆಳ್ತಂಗಡಿಯ ಬಂಡಾಜೆ ಫಾಲ್ಸ್ ಗೆ ಪಾರೇಶ್ ಬಂದಿದ್ದರು. ಶನಿವಾರ ಬೆಂಗಳೂರಿನಿಂದ ಬೈಕ್ ನಲ್ಲಿ ಆಗಮಿಸಿ ಮೂಡಿಗೆರೆ ಬಳಿ ರೂಂ ಮಾಡಿ ಉಳಿದುಕೊಂಡಿದ್ದಾನೆ. ನಂತರ ಭಾನುವಾರ ಬೆಳಗ್ಗೆ 8 ಗಂಟೆಗೆ ಸಂಕಸಾಲೆ ಬಳಿ ಬೈಕ್ ಬಿಟ್ಟು ಟ್ರಕ್ಕಿಂಗ್ ಆರಂಭಿಸಿದ್ದರು.
ದುರ್ಗಮವಾದ ಕಾಡಿನಲ್ಲಿ ಒಬ್ಬಂಟಿಯಾಗಿ ನಡೆದು ಬಂದು ಕೊನೆಗೆ ದಾರಿ ತೋಚದೆ ಗೆಳೆಯನಿಗೆ ಲೋಕೇಷನ್ ಕಳುಹಿಸಿದ್ದ. ಕೂಡಲೇ ಆತನ ಗೆಳೆಯ 112 ಸಹಾಯವಾಣಿ ಹಾಗೂ ಸ್ಥಳೀಯ ತಂಡಕ್ಕೆ ಮಾಹಿತಿ ನೀಡಿ ರಕ್ಷಣೆಗೆ ಮಾನವಿ ಮಾಡಿದ್ದ. ಮೊಬೈಲ್ ನೆಟ್ ವರ್ಕ್ ಸಿಗುವ ಬಂಡಾಜೆ ಫಾಲ್ಸ್ ನ ತುದಿಯ ಕಲ್ಲಿನ ಬಂಡೆಯಲ್ಲಿ ಬೆಂಕಿ ಹಾಕಿಕೊಂಡು ರಕ್ಷಣೆ ಪಡೆದಿದ್ದ ಟೆಕ್ಕಿಯನ್ನು ರಕ್ಷಿಸಲಾಗಿದೆ.
ಭಾನುವಾರ ಸಂಜೆ 6 ಗಂಟೆಯಿಂದ ಸೋಮವಾರ ಬೆಳಗ್ಗೆ 3.30 ವರೆಗೆ ಕಾರ್ಯಾಚರಣೆ ನಡೆಸಲಾಗಿದೆ. ಸತತ 10 ಗಂಟೆಗಳ ಕಾರ್ಯಾಚರಣೆ ಬಳಿಕ ಪಾರೇಶ್ ನನ್ನು ರಕ್ಷಣಾ ತಂಡ ಕಾಡಿನಿಂದ ಕರೆತಂದಿದೆ. ರಕ್ಷಿಸಲಾದ ಟೆಕ್ಕಿ ಪಾರೇಶ್ ಗೆ ಊಟ ಕೊಟ್ಟ ಪೊಲೀಸರು ನಂತರ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳೀಯ ತಂಡ ಹಾಗೂ ಬೆಳ್ತಂಗಡಿ 112 ಸಿಬ್ಬಂದಿಗಳ ಕಾರ್ಯಾಚರಣೆ ನಡೆಸಿ ಸಾಫ್ಟ್ವೇರ್ ಇಂಜಿನಿಯರ್ ಪಾರೇಶ್ ನನ್ನು ರಕ್ಷಿಸಿ, ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.