ಗೃಹಪ್ರವೇಶ ಸಮಾರಂಭಕ್ಕೆ ಆಗಮಿಸಿದ್ದ ತೃತೀಯಲಿಂಗಿಗಳು ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ. ಅಸಭ್ಯವಾಗಿ ವರ್ತಿಸಿದ ಆರೋಪದಡಿ ಮೂರು ತೃತೀಯಲಿಂಗಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ವೈಯಾಲಿಕಾವಲ್ ಪೊಲೀಸ್ ಠಾಣೆಯ ಪೊಲೀಸರು ಮೂರು ತೃತೀಯ ಲಿಂಗಿಗಳನ್ನು ಬಂಧಿಸಿದ್ದಾರೆ. ಶ್ರೀರಾಮಪುರದ ಕೃತಿಕಾ, ಪ್ರಶಾಂತ್ ಅಲಿಯಾಸ್ ಪ್ರೀತಿ ಹಾಗೂ ಮಣಿಕಂಠನ್ ಅಲಿಯಾಸ್ ಪೂಜಾ ಬಂಧಿತರು.
ಗೃಹಪ್ರವೇಶ ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳಿಗೆ ತೃತೀಯಲಿಂಗಿಗಳು ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮನೆಯ ಮಾಲಿಕರು ಗೃಹ ಪ್ರವೇಶದ ಸಂದರ್ಭದಲ್ಲಿ ತೃತೀಯಲಿಂಗಿಗಳನ್ನು ಊಟಕ್ಕೆ ಕರೆದಿದ್ದರು ಎನ್ನಲಾಗಿದೆ.
ಈ ವೇಳೆ ಮೂವರು ತೃತೀಯಲಿಂಗಿಗಳು ಕಾರ್ಯಕ್ರಮಕ್ಕೆ ಹಾಜರಾಗಲು ಮನೆ ಮಾಲೀಕರಿಂದ ಹಣಕ್ಕೆ ಬೇಡಿಕೆಯಿಡಲು ಪ್ರಾರಂಭಿಸಿದ್ದಾರೆ. ಮನೆ ಮಾಲೀಕರು ಅವರಿಗೆ 500 ರೂ ನೀಡಿದ್ದರು, ಆದರೆ ತೃತೀಯಲಿಂಗಿಗಳು ತಲಾ 5,000 ರೂ.ಗೆ ಬೇಡಿಕೆಯಿಟ್ಟಿದ್ದಾರೆ. ಮನೆ ಮಾಲೀಕರು ಅಂತಿಮವಾಗಿ ಅವರಿಗೆ 5,000 ರೂ ಪಾವತಿಸಲು ಒಪ್ಪಿಕೊಂಡಿದ್ದಾರೆ. ಆದರೆ, ಅಷ್ಟರಲ್ಲಿ ಇನ್ನೂ ಹೆಚ್ಚು ಹಣ ನೀಡಬೇಕೆಂದು ತೃತೀಯಲಿಂಗಿಗಳು ಬೇಡಿಕೆ ಇಟ್ಟಿದ್ದಾರೆ.
ಅಷ್ಟಕ್ಕೇ ಸುಮ್ಮನಾಗದೆ, ಸಮಾರಂಭದಲ್ಲಿ ಅತಿಥಿಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಘಟನೆಯನ್ನು ವಿಡಿಯೋ ಮಾಡಿದ ಅತಿಥಿಯನ್ನೂ ನಿಂದಿಸಿದ್ದಾರೆ. ಬಾಯಿಗೆ ಬಂದಂತೆ ಬೈದು, ಕುಟುಂಬಸ್ಥರ ಮುಂದೆ ಅಸಭ್ಯ ವರ್ತನೆ ಮಾಡಿ ದಾಂದಲೆ ನಡೆಸಿದ್ದಾರೆ. ಈ ಬಗ್ಗೆ ರಾಜೇಶ್ ಎಂಬವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.