


ಉಡುಪಿ: ಕಸಾಯಿಖಾನೆಗೆ ಮಾರಾಟ ಮಾಡುವ ಉದ್ದೇಶದಿಂದ ದನದ ಕರುವನ್ನು ಕಳವುಗೈದ ಆರೋಪದ ಮೇಲೆ ಹಿರಿಯಡ್ಕ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.
ಫೆ.17 ರಂದು ಈ ಘಟನೆ ನಡೆದಿದ್ದು, ಪೆರ್ಡೂರು ಗ್ರಾಮದ ಪಾಡಿಗಾರ ನಿವಾಸಿ ರಾಘವೇಂದ್ರ(36) ಮತ್ತು ಕುಂಜದಕಟ್ಟೆ ನಿವಾಸಿ ಸುಧೀಂದ್ರ ಶೆಟ್ಟಿ(36) ಎಂದು ಗುರುತಿಸಲಾಗಿದೆ. ಪೆರ್ಡೂರು ದೇವಸ್ಥಾನದ ಮುಂಭಾಗದಲ್ಲಿರುವ ಹೊಲದಿಂದ ಕರುವನ್ನು ಕದ್ದು, ಆಟೋರಿಕ್ಷಾದಲ್ಲಿ ಅವರು ದನವನ್ನು ಸಾಗಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಉಡುಪಿ ಉಪವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಬೆಳ್ಳಿಯಪ್ಪ ಕೆಯು ಅವರ ನಿರ್ದೇಶನದಲ್ಲಿ ಮತ್ತು ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ, ಪಿಎಸ್ಐ (ಕಾನೂನು ಮತ್ತು ಸುವ್ಯವಸ್ಥೆ) ಪುನೀತ್ ಕುಮಾರ್ ಬಿಇ ಮತ್ತು ಪಿಎಸ್ಐ (ತನಿಖೆ) ವಿಠ್ಠಲ್ ಮಳವಾಡಕರ್ ನೇತೃತ್ವದ ಪೊಲೀಸ್ ತಂಡ, ಸಿಬ್ಬಂದಿಗಳೊಂದಿಗೆ ಆರೋಪಿಗಳನ್ನು ಬಂಧಿಸಿ ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.
ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.








