ಉಡುಪಿ: ಜುಲೈ 28, 2016 ರಂದು ನಡೆದ ಕೊಲೆ ಪ್ರಕರಣ ಇಡೀ ಕರಾವಳಿಯನ್ನು ಬೆಚ್ಚಿಬೀಳಿಸಿತ್ತು. ಅದೇ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ. ಈ ಪ್ರಕರಣ ಹಲವು ವರ್ಷಗಳಿಂದ ಕೋರ್ಟ್ನಲ್ಲಿದ್ದು ಇಂದು ಉಡುಪಿ ಜಿಲ್ಲೆಯ ಪ್ರಮುಖ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ.
ಕೈಗಾರಿಕೋದ್ಯಮಿ ಭಾಸ್ಕರ್ ಶೆಟ್ಟಿ ಅವರನ್ನು ಜುಲೈ 28, 2016 ರಂದು ಅವರ ಉಡುಪಿ ನಿವಾಸದಲ್ಲಿ ಕೊಲೆ ಮಾಡಲಾಯಿತು ಮತ್ತು ಸಾಕ್ಷ್ಯಗಳನ್ನು ನಾಶಮಾಡುವ ಪ್ರಯತ್ನದಲ್ಲಿ ಅವರ ದೇಹವನ್ನು ಹೋಮ ಕುಂಡದಲ್ಲಿ ಸುಡಲಾಯಿತು. ಆರೋಪಿಗಳು ಚಿತಾಭಸ್ಮ ಮತ್ತು ಮೂಳೆಗಳನ್ನು ಒಳಗೊಂಡ ಅವಶೇಷಗಳನ್ನು ಮೂರು ನದಿಗಳಲ್ಲಿ ಎಸೆದಿದ್ದರು. ಕೊನೆಗೆ ಸುಟ್ಟ ಮೂಳೆಗಳ ಜಾಡು ಹಿಡಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಮೂಳೆಗಳ ಡಿಎನ್ಎ ಮಾದರಿಗಳು ಭಾಸ್ಕರ್ ಶೆಟ್ಟಿಯ ತಾಯಿ ಗುಲಾಬಿ ಶೆಟ್ಟಿಯ ರಕ್ತದ ಮಾದರಿಗಳೊಂದಿಗೆ ಹೊಂದಿಕೆಯಾಗಿತ್ತು. ಹಿರಿಯ ವಕೀಲ ಮತ್ತು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎಂ.ಶಾಂತರಾಮ್ ಶೆಟ್ಟಿ ಮೂಲಕ ಪ್ರಕರಣದ ಅಂತಿಮ ವಾದಗಳನ್ನು ಪ್ರಾರಂಭಿಸಲಾಗಿತ್ತು.
ವಾರಗಳ ಹಿಂದಷ್ಟೇ ಆರೋಪಿಗಳಾದ ಮೃತರ ಪತ್ನಿ ರಾಜೇಶ್ವರಿ ಶೆಟ್ಟಿ ಮತ್ತು ಅವರ ಚಾಲಕ ರಾಘವೇಂದ್ರ ಅವರನ್ನು ನ್ಯಾಯಲಯಕ್ಕೆ ಹಾಜರಾಗುವಂತೆ ಕೇಳಿಕೊಂಡಿತ್ತು. ಆದ್ರೆ ಲಾಕ್ಡೌನ್ನಿಂದ ಅವರು ಗೈರು ಹಾಜರಾಗಿದ್ದರು. ಆರೋಪಿಗಳಾದ ರಾಜೇಶ್ವರಿ ಮತ್ತು ರಾಘವೇಂದ್ರ ಅವರಿಗೆ ಜಾಮೀನು ದೊರಕಿತ್ತು. ಆದರೆ ಮತ್ತಿಬ್ಬರು ಆರೋಪಿಗಳಾದ ಪುತ್ರ ನವನೀತ್ ಶೆಟ್ಟಿ, ನಂದಳಿಕೆಯ ನಿರಂಜನ್ ಭಟ್ ಜೈಲಿನಲ್ಲಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ ಉದ್ಯಮಿ ಬಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ತೀರ್ಪು ಇಂದು ಉಡುಪಿ ಜಿಲ್ಲಾ ನ್ಯಾಯಾಲಯ ಪ್ರಕಟ ಮಾಡಿದೆ ಎಂದು ತಿಳಿದು ಬಂದಿದೆ. ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಪ್ರಮುಖ ಆರೋಪಿಗಳು ದೋಷಿ ಎಂದು ಉಡುಪಿ ಜಿಲ್ಲಾ ನ್ಯಾಯಾಲಯ ತೀರ್ಪು ಪ್ರಕಟ ಮಾಡಿದೆ. ಇನ್ನಷ್ಟು ವಿವರಗಳು ತಿಳಿದು ಬರಬೇಕಿದೆ.