ಉಡುಪಿ(ನ.10): ಸರಕು ವಾಹನದಲ್ಲಿ ನಕಲಿ ದಾಖಲೆಗಳೊಂದಿಗೆ ಅಡಿಕೆ ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಯೂನಿಯನ್ ಕಾರ್ಗೊ ಮೂವರ್ಸ್ ಇವರಿಂದ ಒಟ್ಟು 53,10,500ರೂ. ತೆರಿಗೆ ಮತ್ತು ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಮಂಗಳೂರು ಪಶ್ಚಿಮ ವಲಯದ ವಾಣಿಜ್ಯ ತೆರಿಗೆ ಜಂಟಿ ಆಯುಕ್ತ ಉದಯ ಶಂಕರ್ ತಿಳಿಸಿದ್ದಾರೆ.
ಮಂಗಳೂರು ಪಶ್ಚಿಮ ವಲಯದ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು ಅಂಪಾರು- ಕೊಲ್ಲೂರು ರಸ್ತೆಯ ವಂಡ್ಸೆ ಎಂಬಲ್ಲಿ ಸರಕು ವಾಹನವನ್ನು ತಡೆಹಿಡಿದು 380 ಚೀಲ(24700ಕೆ.ಜಿ.) ಅಡಿಕೆ ಸರಕನ್ನು ವಾಹನದೊಂದಿಗೆ ವಶಪಡಿಸಿಕೊಂಡಿದ್ದರು.
ಈ ಕುರಿತು ತನಿಖೆ ನಡೆಸಿದಾಗ ಸಾಗಣೆದಾರರು ಕರ್ನಾಟಕದಲ್ಲಿ ಅಡಿಕೆ ಸರಕನ್ನು ಪಡೆದು ಕೇರಳದ ವರ್ತಕರಿಗೆ ಸಂಬಂಧಿಸಿದ ನಕಲಿ ದಾಖಲೆ ಗಳೊಂದಿಗೆ ಸಾಗಣೆ ಮಾಡುತ್ತಿರುವುದು ಕಂಡುಬಂದಿದೆ. ಅದರಂತೆ ಸರಕು ಮತ್ತು ಸೇವಾ ತೆರಿಗೆ ಕಾಯಿದೆ 2017ರ ಪ್ರಕರಣ 129(1)(ಬಿ)ರಡಿಯಲ್ಲಿ ಆದೇಶ ಹೊರಡಿಸಿ ಈ ದಂಡ ವಿಧಿಸಲಾಗಿದೆ. ಇದನ್ನು ಕಾಸರಗೋಡಿನಿಂದ ಉತ್ತರ ಪ್ರದೇಶಕ್ಕೆ ಸಾಗಾಟ ಮಾಡಲಾಗುತ್ತಿತ್ತು ಎಂದು ಉದಯ ಶಂಕರ್ ತಿಳಿಸಿದ್ದಾರೆ.