ಉಡುಪಿ: ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠಕ್ಕೆ ನೂತನ ಪೀಠಾಧಿಪತಿಯನ್ನು ಘೋಷಿಸಲಾಗಿದೆ. ಸೋದೆ (ವಾದಿರಾಜ) ಮಠದ ವಿಶ್ವವಲ್ಲಭ ತೀರ್ಥರು ನೂತನ ಪೀಠಾಧಿಪತಿಯ ಹೆಸರು ಘೋಷಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳದ ನಿಡ್ಲೆ ಮೂಲದ ಅನಿರುದ್ಧ್ ಸರಳತ್ತಾಯ ಮುಂದಿನ ಶ್ರೀಗಳಾಗಿ ನಿಯುಕ್ತಿಗೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸೋದೆ ಮಠದಲ್ಲಿ ಮೇ 11ರಿಂದ 14ರವರೆಗೆ ಶಿಷ್ಯ ಸ್ವೀಕಾರ ವಿಧಿ ವಿಧಾನಗಳು ಜರುಗಲಿವೆ.
ಶಿರೂರು ಮಠಕ್ಕೆ ನೂತನ ಪೀಠಾಧಿಕಾರಿಯಾಗಿ ನಿಯುಕ್ತಿಗೊಂಡಿರುವ ಅನಿರುದ್ಧ್ ಸರಳತ್ತಾಯ ಮಠದ ಉತ್ತರಾಧಿಕಾರಿಯಾಗಲಿದ್ದಾರೆ. ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಕುಟುಂಬದ 16 ವರ್ಷದ ವಟುವಾಗಿರುವ ಅವರು, ಉಡುಪಿಯ ವಿದ್ಯೋದಯ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಪೂರೈಸಿದ್ದಾರೆ.
ಅಷ್ಟಮಠಗಳಲ್ಲಿ ಬಾಲಸನ್ಯಾಸ ಸ್ವೀಕಾರ ಸಂಪ್ರದಾಯ ಇದೆ. ಸಂಪ್ರದಾಯದ ಪ್ರಕಾರವೇ ವಟುವಿನ ಆಯ್ಕೆ ನಡೆದಿದೆ. ಅಷ್ಟಮಠಗಳ ಯತಿಗಳಿಂದ ಸನ್ಯಾಸ ವಿಚಾರದಲ್ಲಿ ಯಾವುದೇ ಸಂವಿಧಾನ ರಚನೆಯಾಗಿಲ್ಲ. ಎಲ್ಲಾ ಯತಿಗಳ ಗಮನಕ್ಕೆ ತಂದು ಶಿಷ್ಯನ ಆಯ್ಕೆ ಮಾಡಿದ್ದೇವೆ ಎಂದು ಉಡುಪಿಯ ಶಿರೂರಿನಲ್ಲಿ ಸೋದೆ ವಿಶ್ವವಲ್ಲಭತೀರ್ಥ ಸ್ವಾಮೀಜಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.