ಮಂಗಳೂರು: ಉಳ್ಳಾಲ ಬಳಿಯ ಸಮುದ್ರ ಮಧ್ಯೆ ಆಳ ಸಮುದ್ರ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್ ಮಗುಚಿ ಬಿದ್ದು ಓರ್ವ ಕಾರ್ಮಿಕ ನಾಪತ್ತೆಯಾದ ಘಟನೆ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ. ಉಳ್ಳಾಲ ಬಳಿಯ ಸಮುದ್ರ ಮಧ್ಯೆ ನಾಲ್ಕು ವರ್ಷಗಳ ಹಿಂದೆ ಮುಳುಗಿರುವ ಹಡಗು ಡಿಕ್ಕಿಯಾಗಿ ಬೋಟ್ ಮಗುಚಿ ಬಿದ್ದಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:- ಮಂಗಳೂರು: ಅಧ್ಯಾಪಕಿಯ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಎಗರಿಸಿದ ಬಿಸಿಎ ಪದವೀಧರ!
ಬೋಟಿನಲ್ಲಿ 12 ಜನ ಕಾರ್ಮಿಕರಿದ್ದು ಕೂಡಲೇ ಅವರನ್ನು ಹಿಂದಿನಲ್ಲಿದ್ದ ಬೋಟಿನವರು ರಕ್ಷಣೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಹನ್ನೊಂದು ಮಂದಿ ಈಜುತ್ತಾ ಬಂದು ಇನ್ನೊಂದು ಬೋಟಿನ ಮೂಲಕ ಜೀವ ಉಳಿಸಿಕೊಂಡಿದ್ದಾರೆ. ಆದರೆ ಒಬ್ಬಾತ ನೀರಿನಲ್ಲಿ ಕಾಣೆಯಾಗಿದ್ದಾನೆ.
ನಾಪತ್ತೆಯಾದ ಕಾರ್ಮಿಕನನ್ನು ತಮಿಳುನಾಡು ಮೂಲದ ವ್ಯಕ್ತಿ ಎನ್ನಲಾಗಿದೆ. ಆದ್ಯ ಹೆಸರಿನ ಬೋಟ್ ಆಗಿದ್ದು, ಅದರ ಮಾಲಕ ಉಳ್ಳಾಲ ಮೊಗವೀರಪಟ್ಟದ ಭಾನುಪ್ರಕಾಶ್ ಎಂಬವರಾಗಿದ್ದಾರೆ. ಮುಳುಗಿದ್ದ ಬಾರ್ಜ್ ಹಡಗನ್ನು ತೆರವುಗೊಳಿಸಿಲ್ಲ. ಅಲ್ಲದೆ, ಹಡಗು ಇರುವ ಬಗ್ಗೆ ಯಾವುದೇ ಗುರುತನ್ನೂ ಹಾಕಿಲ್ಲ. ಇದರಿಂದಾಗಿ ಮೀನುಗಾರಿಕಾ ಬೋಟ್ ಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಮೀನುಗಾರರು ತಿಳಿಸಿದ್ದಾರೆ.