ಉಳ್ಳಾಲ: ಒಂಟಿಯಾಗಿದ್ದ ವೃದ್ಧೆಯ ಮನೆಗೆ ಅಪರಿಚಿತ ಮಹಿಳೆಯೊಬ್ಬಳು ನುಗ್ಗಿ, 22 ಗ್ರಾಂ ತೂಕದ ಚಿನ್ನದ ಸರ ಹೊತ್ತೊಯ್ದ ಘಟನೆ ಕುಂಪಲ ಮೂರುಕಟ್ಟೆ ಒಂದನೇ ಅಡ್ಡರಸ್ತೆಯ ಮಿತ್ರನಗರ ಎಂಬಲ್ಲಿ ನಡೆದಿದೆ.
ಮಿತ್ರನಗರದ ಸುಶೀಲಾ ಎಂಬುವವರ ಪತಿ ಉಗ್ಗಪ್ಪ ಮೂಲ್ಯ ಅವರು ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದು,. ದಂಪತಿಗೆ ಮಕ್ಕಳು ಇಲ್ಲ ಮನೆಯಲ್ಲಿ ಅವರು ಒಬ್ಬರೇ ವಾಸಿಸುತ್ತಿದ್ದರು. ಮಧ್ಯಾಹ್ನ ಸುಶೀಲ ಅವರು ಮನೆಯ ಹಾಲ್ ನಲ್ಲಿ ಮಲಗಿದ್ದ ಸಂದರ್ಭ ಮನೆಗೆ ನುಗ್ಗಿದ ಅಪರಿಚಿತ ಮಹಿಳೆ ಸುಶೀಲರವರ ಮುಖಕ್ಕೆ ದಿಂಬನ್ನು ಅದುಮಿ ಸರವನ್ನು ದರೋಡೆಗೈದು ಪರಾರಿಯಾಗಿದ್ದಾಳೆ. ದರೋಡೆಗೈದ ಆಗಂತುಕೆ ಬಾಗಿಲಿನಿಂದ ಹೊರ ಓಡಿದಾಗ ಸುಶೀಲ ಅವರು ಮಹಿಳೆ ಚೂಡಿದಾರ್ ಧರಿಸಿರುವುದನ್ನು ಗಮನಿಸಿದ್ದಾರೆ.
ಈ ಹಿಂದೆನೂ ಸುಶೀಲ ಅವರ ಎರಡು ಚಿನ್ನದ ಬಳೆಗಳು ಕಳವಾಗಿದ್ದು ಪೊಲೀಸ್ ದೂರು ನೀಡಿರಲಿಲ್ಲ.
ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸ್ ಠಾಣಾ ನಿರೀಕ್ಷಕರಾದ ಸಂದೀಪ್ ,ಉಪ ನಿರೀಕ್ಷಕರಾದ ಶೀತಲ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬಿಜೆಪಿ ಮುಖಂಡ ಸತೀಶ್ ಕುಂಪಲ ಅವರು ಪೊಲೀಸರಲ್ಲಿ ಆರೋಪಿಯ ಶೀಘ್ರ ಬಂಧನಕ್ಕೆ ಆಗ್ರಹಿಸಿದ್ದಾರೆ.