ಬೆಳಗಾವಿ(ನ.8): ದೇಶದಲ್ಲಿ ನಡೆದ ಪುಲ್ವಾಮಾ ದಾಳಿ ಇಡೀ ದೇಶದಲ್ಲಿ ದೊಡ್ಡ ಆಘಾತ ತಂದಿದ್ದು ಈ ಘಟನೆ ಬಗ್ಗೆ ದೇಶದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಪುಲ್ವಾಮ, ಕಾರ್ಗಿಲ್ ಸೇರಿ ಅನೇಕ ನಿತ್ಯ ಗಡಿಯಲ್ಲಿ ಯೋಧರು ಹುತಾತ್ಮರಾಗುತ್ತಿದ್ದಾರೆ. ಹೀಗೆ ಹುತಾತ್ಮರಾಗಿರೋ ಯೋಧರಿಗಾಗಿ ಸ್ಮಾರಕ ನಿರ್ಮಾಣ ಮಾಡೊಕೆ ವ್ಯಕ್ತಿಯೊಬ್ಬರು ಇಡೀ ದೇಶ ಸುತ್ತುತ್ತಿದ್ದಾರೆ. ಪ್ರತಿಯೊಬ್ಬ ಯೋಧನ ಮನೆಗೆ ಹೋಗಿ ಸೈನಿಕರು ಹುಟ್ಟಿ ಬೆಳೆದ ಮಣ್ಣು ಸಂಗ್ರಹಿಸುತ್ತಿದ್ದಾರೆ. ಬೆಂಗಳೂರು ಮೂಲದ ಉಮೇಶ್ ಗೋಪಿನಾಥ್ ಜಾಧವ್ ದೇಶದಲ್ಲಿ ಯಾತ್ರೆ ಆರಂಭಿಸಿದ್ದಾರೆ. ಸಾವಿರಾರು ಕಿಲೋ ಮಿಟರ್ ಸುತ್ತಾಡಿರೋ ಜಾಧವ್ ಬೆಳಗಾವಿಗೆ ಆಗಮಿಸಿದರು.
ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಹೋಗುವ ಮೊದಲು ದೆಹಲಿಯ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ ಅವರನ್ನು ಭೇಟಿಯಾಗಿ ತಮ್ಮ ಉದ್ದೇಶವನ್ನು ತಿಳಿಸಿದರು. ಇನ್ನೂ ಉಮೇಶ್ ಕಾರ್ಯಕ್ಕೆ ಪಾಟೀಲ್ ಹರ್ಷ ವ್ಯಕ್ತ ಪಡಿಸಿದ್ದಾರೆ.ಬಾವುಟ ತೋರಿಸುವ ಮೂಲಕ ಉಮೇಶ ಜಾಧವ್ ಉದ್ದೇಶ ಯಶಸ್ವಿಯಾಗಿಲಿ ಎಂದು ಹಾರೈಸಿದರು.
ಬೆಂಗಳೂರಿನಿಂದಲೇ 2019 ಏಪ್ರಿಲ್ 9 ರಿಂದ 2020 ಏಪ್ರಿಲ್ 9ರವೆರಗೆ ಮೊದಲ ಸುತ್ತಿನ ಯಾತ್ರೆ ಪೂರೈಸಿರುವ ಜಾಧವ್ ಈಗಾಗಲೇ ಮೊದಲ ಸುತ್ತಿನ ಯಾತ್ರೆ ವೇಳೆ 98 ಹುತಾತ್ಮ ಯೋಧರ ಮನೆಗಳಿಗೆ ಭೇಟಿ ನೀಡಿದ್ದಾರೆ. ಅವರ ಮಣ್ಣು ಸಂಗ್ರಹ ಮಾಡಿದ್ದರಲ್ಲದೇ ಅವರ ಪೋಷಕರ ಜತೆ ಮಾತನಾಡಿದ್ದಾರೆ. ಗುಜರಾತ್ನ ಕಛ್ ಮುಂತಾದ ಕಡೆಗೂ ಭೇಟಿ ನೀಡಿ ಹುತಾತ್ಮ ಯೋಧರ ಕುಟುಂಬಗಳು ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಯೋಧರು, ಸೇನಾಧಿಕಾರಿಗಳನ್ನು ಭೇಟಿಯಾಗಿದ್ದಾರೆ. ದೇಶದ 28 ರಾಜ್ಯಗಳು 9 ಕೇಂದ್ರಾಡಳಿತ ಪ್ರದೇಶಗಳಲ್ಲಿ ಅವರು ಯಾತ್ರೆ ನಡೆಸುತ್ತಿದ್ದಾರೆ.
ದೇಶದ ಉದ್ದಗಲಕ್ಕೂ ಹುತಾತ್ಮ ಯೋಧರ ಸಮಾಧಿಗಳಿಂದ ಸಂಗ್ರಹ ಮಾಡುತ್ತಿರುವ ಪವಿತ್ರ ಮಣ್ಣನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಾಣವಾಗಲಿರುವ ಸೇನಾ ಸ್ಮಾರಕದಲ್ಲಿ ಭಾರತದ ಭೂಪಟವನ್ನು ನಿರ್ಮಿಸುವುದು ಜಾಧವ್ ಅವರ ಉದ್ದೇಶ. ಈ ಉದ್ದೇಶದೊಂದಿಗೆ ಅವರು ದೇಶಪ್ರೇಮ ಭಾರತಯಾತ್ರೆ ಕೈಗೊಂಡಿದ್ದಾರೆ.
ತಮ್ಮ ಯಾತ್ರೆಗೆ ಮಾರುತಿ-800 ಕಾರನ್ನು ಬಳಸಿಕೊಂಡಿದ್ದು. ಯಾತ್ರೆಗೆ ಅಗತ್ಯವಾಗಿ ಆ ಕಾರನ್ನು ರೂಪಾಂತರ ಮಾಡಿಕೊಂಡಿದ್ದಾರೆ. ಆ ಕಾರಿನ ಹಿಂದೆ ಹುತಾತ್ಮ ಯೋಧರ ಸಮಾಧಿ ಮಣ್ಣು ಸಂಗ್ರಹ ಮಾಡಿಟ್ಟುಕೊಳ್ಳಲು ಒಂದು ಟ್ರ್ಯಾಲಿಯನ್ನು ಜೋಡಿಸಿಕೊಂಡಿದ್ದಾರಲ್ಲದೇ ಆ ಟ್ರ್ಯಾಲಿ ಹಿಂದೆ ಒಂದು ಬೈಕ್ ಮತ್ತು ಒಂದು ಸೈಕಲ್ ಅನ್ನು ಜೋಡಿಸಲಾಗಿದೆ. ಕಾರು ಸಂಚರಿಸಲು ಸಾಧ್ಯವಾಗದ ದಾರಿಯಲ್ಲಿ ಜಾಧವ್ ಅವರು ಈ ಸೈಕಲ್, ಬೈಕ್ ಬಳಸಲಿದ್ದಾರೆ.