ಸ್ಯಾಂಡಲ್ ವುಡ್ನ ರಿಯಲ್ ಸ್ಟಾರ್ ಉಪೇಂದ್ರ ಸದ್ಯ ಪ್ಯಾನ್ ಇಂಡಿಯಾ ಕಬ್ಜ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕಬ್ಜ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ.
ಈ ನಡುವೆ ರಿಯಲ್ ಸ್ಟಾರ್ ನಿರ್ದೇಶಕ ಶಶಾಂಕ್ ಜೊತೆ ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದಾರೆ. ಶಶಾಂಕ್ ಮತ್ತು ಉಪೇಂದ್ರ ಸಿನಿಮಾ ಅನೌನ್ಸ್ ಆಗಿ ಎರಡು ವರ್ಷಗಳಾಗಿದೆ. ಇನ್ನು ಕೂಡ ಸಿನಿಮಾ ಪ್ರಾರಂಭವಾಗಿಲ್ಲ. ಸಿನಿಮಾ ನಿಂತೋಯಿತಾ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು.
ಆದರೆ ಇತ್ತೀಚಿಗಷ್ಟೆ ಸಿನಿಮಾತಂಡ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭಿಸುವುದಾಗಿ ಹೇಳುವ ಮೂಲಕ ಸಿನಿಮಾ ಶುರುವಾಗುವ ಸೂಚನೆ ನೀಡಿದ್ದರು.ಇದೀಗ ಸಿನಿಮಾಗೆ ನಾಯಕಿಯ ಆಯ್ಕೆಯಾಗಿದೆ. ಉಪೇಂದ್ರ ಜೊತೆ ನಾಯಕಿಯಾಗಿ ಹರಿಪ್ರಿಯಾ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಈಗಾಗಲೇ ಸಿನಿಮಾಗೆ ರುಕ್ಮಿಣಿ ವಸಂತ್ ಮತ್ತು ನಿಶ್ವಿಕಾ ಆಯ್ಕೆಯಾಗಿದ್ದರು. ಆದರೆ ರುಕ್ಮಿಣಿ ಸಿನಿಮಾದಿಂದ ಹೊರ ನಡೆದಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ರುಕ್ಮಿಣಿ ಜಾಗಕ್ಕೆ ಹರಿಪ್ರಿಯಾ ಬಂದಿದ್ದಾರೆ.
ಅಂದ ಹಾಗೆ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇದ್ದು, ನಿಶ್ವಿಕಾ ನಟಿಸುವುದು ಬಹುತೇಕ ಖಚಿತವಾಗಿದೆ. ಇನ್ನೂ ಈ ಚಿತ್ರದ ಶೀರ್ಷಿಕೆ ಅಂತಿಮವಾಗಿಲ್ಲ. ಕಬ್ಜ ಸಿನಿಮಾದ ಚಿತ್ರೀಕರಣ ಮುಗಿಯುತ್ತಿದ್ದಂತೆ ಉಪೇಂದ್ರ ಶಶಾಂಕ್ ಜೊತೆ ಸಿನಿಮಾ ಪ್ರಾರಂಭ ಮಾಡಲಿದ್ದಾರೆ.