ಹೊಸದಿಲ್ಲಿ, ಮಾ. 26: ಪಾಟ್ನಾ-ಟಾಟಾನಗರ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಪೂರೈಸಲಾದ ಪ್ಯಾಕೇಟ್ ಮೊಸರಿನಲ್ಲಿ ಪ್ರಯಾಣಿಕರೋರ್ವರು ಹುಳಗಳನ್ನು ಪತ್ತೆ ಮಾಡಿದ ಬಳಿಕ ರೈಲ್ವೆ ಆಹಾರ ಪೂರೈಕೆದಾರನ ಗುತ್ತಿಗೆಯನ್ನು ರದ್ದುಗೊಳಿಸಿದೆ ಹಾಗೂ ಆತನ ಕಂಪೆನಿಗೆ 50 ಲಕ್ಷ ರೂ.ದಂಡ ವಿಧಿಸಿದೆ.

ಆಹಾರ ಪೂರೈಕೆಯನ್ನು ಸರಿಯಾಗಿ ನಿರ್ವಹಿಸದೇ ಇರುವುದಕ್ಕಾಗಿ ರೈಲ್ವೆ ಸಚಿವಾಲಯ ತನ್ನದೇ ಕಂಪೆನಿ ಭಾರತೀಯ ರೈಲ್ವೆ ಕ್ಯಾಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮ (ಐಆರ್ಸಿಟಿಸಿ)ಕ್ಕೆ ಕೂಡ 10 ಲಕ್ಷ ರೂ. ದಂಡ ವಿಧಿಸಿದೆ.ಮಾರ್ಚ್ 15ರಂದು ವಂದೇ ಭಾರತ್ ರೈಲಿನಲ್ಲಿದ್ದ ಏಳು ಮಂದಿ ಪ್ರಯಾಣಿಕರ ಗುಂಪಿಗೆ ಭೋಜನದೊಂದಿಗೆ ಪ್ರಸಿದ್ಧ ಬ್ಯಾಂಡ್ನ ಮೊಸರು ಪ್ಯಾಕೇಟ್ ಪೂರೆಸಲಾಗಿತ್ತು. ಅದರಲ್ಲಿ ಒಂದು ಪ್ಯಾಕೇಟ್ ಅನ್ನು ತೆರೆದಾಗ ಜೀವಂತ ಹುಳ ಹಾಗೂ ಕೀಟಗಳು ಪತ್ತೆಯಾಗಿವೆ.
ಪ್ರಯಾಣಿಕ ರಿತೇಶ್ ಸಿಂಗ್ ಕೂಡಲೇ ಈ ವಿಷಯವನ್ನು ತನ್ನ ‘ಎಕ್ಸ್ನ ಹ್ಯಾಂಡಲ್ನಲ್ಲಿ ಹಾಕಿ ಗಮನ ಸೆಳೆದರು. ಅಲ್ಲದೆ, ಐಆರ್ಸಿಟಿಸಿ, ರೈಲ್ವೆ ಸಚಿವರು ಹಾಗೂ ಇತರರಿಗೆ ಅದನ್ನು ಟ್ಯಾಗ್ ಮಾಡಿದರು.ಘಟನೆಯ ಬಗ್ಗೆ ಹಾಗೂ ಅದಕ್ಕೆ ಸಂಬಂಧಿಸಿ ಕ್ರಮ ತೆಗೆದುಕೊಂಡ ತನ್ನ ವರದಿಯಲ್ಲಿ ಐಆರ್ಸಿಟಿಸಿ ಮೊಸರು ಪ್ಯಾಕೇಟ್ ಅನ್ನು ಪಾಟ್ನಾದಿಂದ ತರಲಾಗಿದೆ. ಪ್ಯಾಕೇಟ್ನಲ್ಲಿ 2026 ಮಾರ್ಚ್ 9 ಉತ್ಪಾದನಾ ದಿನಾಂಕ ಹಾಗೂ 2026 ಎಪ್ರಿಲ್ 7 ಅವಧಿ ಮುಗಿದ ದಿನಾಂಕವೆಂದು ದಾಖಲಾಗಿದೆ ಎಂದು ಕಂಡು ಹಿಡಿದಿದೆ.ಮೊಸರಿನಲ್ಲಿ ಹುಳು ಹಾಗೂ ಕೀಟಗಳು ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪ್ರಯಾಣಿಕರಲ್ಲಿ ಕ್ಷಮೆ ಕೋರಿದ್ದಾರೆ.
ಅವರಿಗೆ ಒಣ ಹಣ್ಣುಗಳ ಮಿಶ್ರಣ ಹಾಗೂ ಕೆಲವು ಸಿಹಿ ತಿಂಡಿಗಳನ್ನು ನೀಡಿದ್ದಾರೆ ಎಂದು ವರದಿ ಹೇಳಿದೆ.
ವರದಿಯ ಪ್ರಕಾರ, ಐಆರ್ಸಿಟಿಸಿ ಆಹಾರ ಪೂರೈಕೆ ಕಂಪೆನಿ ಕೃಷ್ಣ ಎಂಟರ್ಪ್ರೈಸಸ್ಗೆ 25,000 ದಂಡ ವಿಧಿಸಿತ್ತು. ಅಲ್ಲದೆ, ಆಹಾರ ಪದಾರ್ಥಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯದ ಕುರಿತು ಎಚ್ಚರಿಸಿತ್ತು. ಆದರೆ, ಐಆರ್ಸಿಟಿಸಿ ಕ್ರಮದಿಂದ ಅಸಮಾಧಾನಗೊಂಡ ರೈಲ್ವೆ ಸಚಿವಾಲಯ ಬುಧವಾರ ಕೃಷ್ಣ ಎಂಟರ್ಪ್ರೈಸಸ್ನ ಗುತ್ತಿಗೆಯನ್ನು ರದ್ದುಗೊಳಿಸಿದೆ ಹಾಗೂ ದಂಡವನ್ನು 25 ಸಾವಿರ ರೂಪಾಯಿಯಿಂದ 50 ಲಕ್ಷ ರೂಪಾಯಿಗೆ ಏರಿಕೆ ಮಾಡಿದೆ.








