ಪುತ್ತೂರು: ನಾಲ್ಕು ಚಕ್ರದ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪದಲ್ಲಿ ಸಕಲೇಶಪುರ ಪೊಲೀಸರಿಂದ ಬಂಧಿತ 6 ಜನ ಕಳ್ಳರನ್ನು ಪುತ್ತೂರು ಪೊಲೀಸರು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಆರು ಜನ ಕಳ್ಳರನ್ನು ಸಕಲೇಶಪುರ ಪೊಲೀಸರು ಬಂಧಿಸಿ ಅವರಿಂದ 44 ಲಕ್ಷ ರೂ.ಬೆಲೆ ಬಾಳುವ 20 ವಾಹನಗಳನ್ನು ವಶಪಡಿಸಿಕೊಂಡಿದ್ದರು.ಈ ವಾಹನ ಕಳವಿನ ಪೈಕಿ ೪ ವಾಹನ ಪುತ್ತೂರಿನಿಂದ ಕಳವಾದ ವಾಹನಗಳಾಗಿರುವುದರಿಂದ ಮುಂದಿನ ತನಿಖೆಗಾಗಿ ಪುತ್ತೂರು ಪೊಲೀಸರು ಮಾ.೮ರಂದು ಆರೋಪಿಗಳನ್ನು ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಶಬ್ಬೀರ್, ಮೋಯ್ದು ಕುನ್ನಿ, ರಫೀಕ್, ಖಾದರ್ ಶರೀಫ್, ಸೈಯದ್ ಅಜ್ಮಲ್, ಮಹಮದ್ ಮುಬಾರಕ್ ಆರೋಪಿಗಳು.ಸಕಲೇಶಪುರದ ಪೋಲಿಸರು ಬಾಳ್ಳುಪೇಟೆಯಲ್ಲಿ ವಾಹನವನ್ನು ತಪಾಸಣೆ ಮಾಡುತ್ತಿರುವಾಗ ಹಾಸನದ ಕಡೆಯಿಂದ ಮಂಗಳೂರು ಕಡೆಗೆ ಹೋಗಲು ಮಾರುತಿ 800 ಕಾರು ನಂಬರ್ ಪ್ಲೇಟ್ ಇಲ್ಲದೇ ಬರುತ್ತಿರುವುದನ್ನು ಗಮನಿಸಿ ತಡೆದು ನಿಲ್ಲಿಸಿ ವಾಹನದ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿದಾಗ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ವಾಹನದ ದಾಖಲೆಗಳನ್ನು ಹಾಜರುಪಡಿಸಲು ವಿಫಲವಾಗಿದ್ದರು.ಬಳಿಕ ಅವರನ್ನು ವಶಕ್ಕೆ ಪಡೆದು ಸಕಲೇಶಪುರ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಕಳವು ಕೃತ್ಯ ಬೆಳಕಿಗೆ ಬಂದಿತ್ತು.
ವಿಚಾರಣೆ ವೇಳೆ ಕಳವು ಮಾಡಿದ ಕಾರುಗಳ ಪೈಕಿ ಪುತ್ತೂರಿನಿಂದ ನಾಲ್ಕು ಕಾರುಗಳನ್ನು ಕಳವು ಮಾಡಿರುವುದಾಗಿ ಆರೋಪಿಗಳು ಬಾಯಿ ಬಿಟ್ಟಿದ್ದರು.ಆರೋಪಿಗಳಿಂದ ಕಳವು ಮಾಡಿದ ವಾಹನವನ್ನು ವಶಕ್ಕೆ ಪಡೆದು ಕೊಂಡಿದ್ದು, ಇದೀಗ ಪುತ್ತೂರು ಪೊಲೀಸರು ಬಾಡಿ ವಾರಂಟ್ ಮೂಲಕ ೬ ಮಂದಿ ಆರೋಪಿಗಳನ್ನು ಕಸ್ಟಡಿಗೆ ಪಡೆದುಕೊಂಡಿದ್ದಾರೆ.