ವಿಟ್ಲ: ಪೆರುವಾಯಿ ಅಪ್ರಾಪ್ತ ಹಿಂದೂ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಘಟನೆಯನ್ನು ಖಂಡಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ವಿಟ್ಲದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳದ ಮುಖಂಡರು ಆಗ್ರಹಿಸಿದರು.
ಈ ಘಟನೆ ಅತ್ಯಂತ ಖಂಡನೀಯವಾಗಿದ್ದು, ಹೆಣ್ಣು ಮಕ್ಕಳಿಗೆ ಅನ್ಯಾಯವಾದ ಸಂದರ್ಭ ವಿಶ್ವ ಹಿಂದೂ ಪರಿಷದ್ ಬಜರಂಗದಳ ಖಂಡಿಸುವ ಕಾರ್ಯವನ್ನು ಮಾಡುತ್ತದೆ. ದಲಿತ ಯುವತಿಗೆ ಆಗಿರುವ ಅನ್ಯಾಯಕ್ಕೆ ಸೂಕ್ತ ನ್ಯಾಯ ಸಿಗಬೇಕು ಎಂದು ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾಧ್ಯಕ್ಷ ಕೃಷ್ಣ ಪ್ರಸನ್ನ ಆಗ್ರಹಿಸಿದರು.
ದೌರ್ಜನ್ಯ ಎಸಗಿದ ದುಷ್ಕರ್ಮಿಗಳನ್ನು ತಮ್ಮ ಸಂಘಟನೆಯ ಜೊತೆಗೆ ತಳುಕು ಹಾಕುವ ಕಾರ್ಯ ಕೆಲವು ಹಿತಾಸಕ್ತಿಗಳು ನಡೆಯುತ್ತಿದೆ.ಸಾಮಾಜಿಕ ಜಾಲತಾಣದಲ್ಲಿ ಎರಡು ದಿನಗಳಿಂದ ತಪ್ಪು ಮಾಹಿತಿ ರವಾನೆಯಾಗುವ ರೀತಿಯಲ್ಲಿ ಮಾಡಲಾಗುತ್ತಿದೆ. ದುಷ್ಟ ಕೃತ್ಯವನ್ನು ಮಾಡಿರುವ ಆರೋಪಿಗಳು ಬಜರಂಗದಳದ ಕಾರ್ಯಕರ್ತರಲ್ಲ, ಸಂಘಟನೆಯಲ್ಲಿ ಅವರು ಗುರುತಿಸಿಕೊಂಡಿಲ್ಲ, ಬಜರಂಗದಳಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಈ ವೇಳೆ ತಿಳಿಸಿದರು.
ಕೆಟ್ಟ ಕೆಲಸ ಮಾಡಿದವರು ಯಾವುದೇ ಧರ್ಮದವರಿದ್ದರೂ ಅದನ್ನು ಬಜರಂಗದಳ ಖಂಡಿಸುತ್ತದೆ. ಹಿಂದು ಹುಡುಗರೆಲ್ಲರೂ ಬಜರಂಗದಳದ ಕಾರ್ಯಕರ್ತರಲ್ಲ. ಬಜರಂಗದಳದ ಕಾರ್ಯಕರ್ತರು ಅಂತಹ ಕೆಲಸ ಮಾಡಿದರು ಅದನ್ನು ಖಂಡಿಸುವ ಕಾರ್ಯವನ್ನು ನಾವು ಮಾಡುತ್ತೇವೆ ಎಂದು ವಿಟ್ಲದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಯಾರೇ ತಪ್ಪು ಮಾಡಿದರೂ ಅದನ್ನು ಬಜರಂಗದಳದ ಜತೆಗೆ ಸೇರಿಸುವ ಕಾರ್ಯಮುಂದಿನ ದಿನದಲ್ಲಿ ನಡೆಯುವ ಸಾಧ್ಯತೆಗಳಿವೆ. ಕರ್ನಾಟಕದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧ ಮಾಡುತ್ತೇವೆ ಎಂದಿತ್ತು ಇದಕ್ಕೆ ಪೂರಕವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ. ಸಮಾಜದ್ರೋಹಿ, ದೇಶದ್ರೋಹಿ ಕೆಲಸವನ್ನು ಸಂಘಟನೆ ಮಾಡುತ್ತಿಲ್ಲ, ಸಮಾಜಕ್ಕಾಗಿ ಏನೆಲ್ಲಾ ಮಾಡುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಬಜರಂಗದಳದ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಮಾಡಲಾಗುತ್ತಿದೆ. ಈ ಕೃತ್ಯದಲ್ಲಿ ಯಾರೇ ಭಾಗಿಯಾದ ಆರೋಪಿಗಳನ್ನು ಸೂಕ್ತ ತನಿಖೆಗೆ ಒಳಪಡಿಸಿ ತಕ್ಕ ಶಿಕ್ಷೆಯನ್ನು ಕೊಡಬೇಕೆಂದು ಆಗ್ರಹಿಸಿದರು. ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಂಘಟನೆಯನ್ನು ಇಂತಹ ಕೃತ್ಯಗಳ ಜೊತೆಗೆ ತಳುಕು ಹಾಕುವ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಜರಂಗದಳ ಪುತ್ತೂರು ಜಿಲ್ಲಾ ಸಂಯೋಜಕ್ ಭರತ್ ಕುಮ್ಡೇಲ್, ವಿಶ್ವ ಹಿಂದೂ ಪರಿಷದ್ ಮುಖಂಡ ಪದ್ಮನಾಭ ಕಟ್ಟೆ ಉಪಸ್ಥಿತರಿದ್ದರು.